ಗಾನಯೋಗಿ ಪಂಚಾಕ್ಷರ ಗವಾಯಿಗಳ ಆದರ್ಶಗಳನ್ನು ಅನುಸರಿಕೊಂಡು ಬಂದ ಪುಟ್ಟರಾಜ ಗವಾಯಿಗಳ ಜೀವನ, ಸಾಧನೆ ಕುರಿತಾಗಿ ನಿರ್ಮಾಣವಾಗಿರುವ ಚಲನಚಿತ್ರ ‘ಶಿವಯೋಗಿ ಪುಟ್ಟಯ್ಯಜ್ಜ’ ಸಂಕ್ರಾಂತಿಗೆ ತೆರೆಕಾಣಲಿದೆ.
ಹಿರಿಯ ಕಲಾವಿದ ಉದಯ್ಕುಮಾರ್ ಅವರ ಮೊಮ್ಮಗಳಾದ ಹಂಸವಿಜೇತ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಹಲವಾರು ತಿಂಗಳ ಹಿಂದೆಯೇ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ಕನ್ನಡ ಚಿತ್ರರಂಗದ ನಿರ್ಮಾಪಕರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿ, ತಡೆಯಾಜ್ಞೆ ತಂದಿದ್ದ ಕಾರಣ ಚಿತ್ರ ಬಿಡುಗಡೆ ಯಾಗಿರಲಿಲ್ಲ.
ಬನಶಂಕರಿ ಮಹಾತ್ಮೆ ಚಿತ್ರ ನಿರ್ಮಿಸಿದ್ದ ಶ್ಯಾಮ್ ಮುಕುಂದ್ ನವಲೆ ಈ ಚಿತ್ರದ ನಿರ್ಮಾಪಕರು. ದಶಕದ ಹಿಂದೆ ಪಂಚಾಕ್ಷರ ಗವಾಯಿಗಳ ಚಿತ್ರದಲ್ಲಿ ಬಾಲ ಪಂಚಾಕ್ಷರನಾಗಿ ಕಾಣಿಸಿಕೊಂಡಿದ್ದ ನಟ ವಿಜಯರಾಘವೇಂದ್ರ, ಈಚಿತ್ರದಲ್ಲಿ ಪುಟ್ಟ ರಾಜ ಗವಾಯಿಗಳಾಗಿ ಅಭಿನಯಿಸಿದ್ದು, ನಟಿ ಶ್ರುತಿ ತಾಯಿ ಪಾತ್ರ ನಿರ್ವಹಿಸಿದ್ದಾರೆ. ಗದಗ, ಬಾದಾಮಿ, ಪಟ್ಟದಕಲ್ಲು, ಐಹೊಳೆ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.
ಚಿತ್ರ ಈಗಾಗಲೇ ಸೆನ್ಸಾರ್ ಮುಂದೆ ಪ್ರದರ್ಶನಗೊಂಡು ‘ಯು’ ಪ್ರಮಾಣಪತ್ರ ಪಡೆದಿದೆ. ಚಿತ್ರ ತಂಡ ಹೊಸ ವರ್ಷದಲ್ಲಿ ಸಂಕ್ರಾಂತಿ ವೇಳೆಗೆ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಅಮರ ಪ್ರಿಯ ಅವರ ಸಂಗೀತ ಹಾಗೂ ಸತೀಶ್ಚಂದ್ರ ಬೆಳವಂಗಲ ಅವರ ಛಾಯಾಗ್ರಹಣವಿದೆ. ಅಭಿಜಿತ್, ಅನು ಪ್ರಭಾಕರ್, ಭವ್ಯಶ್ರೀ ರೈ, ಶಶಿಕುಮಾರ್, ಉಮೇಶ್ ನವಲೆ ತಾರಾಬಳಗದಲ್ಲಿ ಇದ್ದಾರೆ.