ಬೆಂಗಳೂರು: ‘ಪೊಲೀಸರು ವಿನಾಕಾರಣ ಮಗನನ್ನು ಬಂಧಿಸಿದ್ದಾರೆ. ನಿರಪರಾಧಿಯಾದ ಆತ ಖಂಡಿತ ಆರೋಪ ಮುಕ್ತನಾಗಿ ಬರುತ್ತಾನೆ’ ಎಂದು ಮುಸ್ತಫಾನ ಪೋಷಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಬ್ಗಯೊರ್ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದ ಮುಸ್ತಫಾನ ತಾಯಿ ಜಹಿರಾ ಅವರು, ‘ಮಗ ಅತ್ಯಾಚಾರದಂತಹ ದುಷ್ಕೃತ್ಯ ಎಸಗಲು ಸಾಧ್ಯವೇ ಇಲ್ಲ’ ಎಂದರು.
‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಗನನ್ನು ಪತಿ ಮತ್ತು ನಾನು ಬೆಳಿಗ್ಗೆ ಭೇಟಿಯಾದೆವು. ಮಾಡದ ತಪ್ಪಿಗೆ ಜೈಲು ಸೇರಿರುವ ಆತ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದಾನೆ. ಘಟನೆಯಿಂದ ಬೇಸರಗೊಂಡಿರುವ ಆತ ಸರಿಯಾಗಿ ಮಾತನಾಡಲಿಲ್ಲ’ ಎಂದು ತಿಳಿಸಿದರು.
ಕುಟುಂಬದ ಆಧಾರವಾಗಿದ್ದ ಮಗನನ್ನು ಪೊಲೀಸರು ಬಂಧಿಸಿರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇದರಿಂದಾಗಿ ಪತಿ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಜಹಿರಾ ಅಳಲು ತೋಡಿಕೊಂಡರು.
ಬ್ಯಾಡ್ಜ್ ಕಡ್ಡಾಯ: ಶಾಲಾ ವಾಹನ ಚಾಲಕರು ಮತ್ತು ವಾಹನಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕೆಲಸದ ಅವಧಿಯಲ್ಲಿ ಶಾಲೆಯ ವಿವರವುಳ್ಳ ಬ್ಯಾಡ್ಜ್ ಧರಿಸುವುದು ಕಡ್ಡಾಯ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ವಾಹನ ಚಾಲಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಬ್ಯಾಡ್ಜ್ ಧರಿಸಬೇಕೆಂದು ಸಾರಿಗೆ ಇಲಾಖೆಯು 2013ರ ಸುರಕ್ಷತಾ ಮಾರ್ಗಸೂಚಿಯಲ್ಲಿ ತಿಳಿಸಿದೆ’ ಎಂದು ಹೇಳಿದರು.
ಬ್ಯಾಡ್ಜ್ ಧರಿಸದ ಚಾಲಕರು ಮತ್ತು ಸಿಬ್ಬಂದಿಯ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬಹುದು.
ಆ ಮಾಹಿತಿ ಆಧರಿಸಿ ಶಾಲಾ ಸಿಬ್ಬಂದಿ ಮತ್ತು ಚಾಲಕರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಅವರು ತಿಳಿಸಿದರು.