ನವದೆಹಲಿ (ಪಿಟಿಐ/ಐಎಎನ್ಎಸ್): ಹೊಸ ಸಂಸತ್ನ ಮೊತ್ತಮೊದಲ ಅಧಿವೇಶನದ ಪ್ರಪ್ರಥಮ ಕಲಾಪಕ್ಕೆ ಕೇಂದ್ರ ಸಚಿವರಾಗಿದ್ದ ಗೋಪಿನಾಥ್ ಮುಂಡೆ ಅವರ ದುರಂತ ಸಾವಿನಿಂದಾಗಿ ಸೂತಕದ ಛಾಯೆ ಕವಿದಿತ್ತು.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿ ನಾಥ್ ಮುಂಡೆ ಅವರಿಗೆ ಬುಧವಾರ ಆರಂಭಗೊಂಡ ಮೊದಲ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು. ಬಳಿಕ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು.
‘ದೇಶದ ಜನರ ಕ್ಷೇಮಾಭಿವೃದ್ಧಿಯ ಗುರುತರ ಜವಾಬ್ದಾರಿ ನೂತನ ಲೋಕಸಭೆಯ ಮೇಲಿದೆ’ ಎಂದು ಹಂಗಾಮಿ ಸ್ಪೀಕರ್್ ಕಮಲ್ನಾಥ್ ಹೇಳಿದರು.
16ನೇ ಲೋಕಸಭೆಗೆ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಲೋಕಸಭೆ ಮಹಾಕಾರ್ಯದರ್ಶಿ ಪಿ.ಶ್ರೀಧರನ್್ ಓದಿ ಹೇಳಿದರು. ನೂತನ ಸದಸ್ಯರು ಗುರುವಾರ ಪ್ರಮಾಣವಚನ ಸ್ವೀಕರಿಸಲು ಒಪ್ಪಿಕೊಂಡಾಗ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು.
ಇದಕ್ಕೂ ಮುನ್ನ, ಮುಂಡೆ ಅವರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು.
ನೂತನ ಲೋಕಸಭೆ ಅಧಿವೇಶನ ಶುರುವಾದ ದಿನವೇ ಮುಂದೂಡಿಕೆಯಾಗಿದ್ದು ಇದೇ ಮೊದಲು ಎನ್ನುವುದು ವಿಶೇಷ.