ಲಕ್ಷ್ಮೇಶ್ವರ: ಮೊಹರಂ ಹಬ್ಬ ಬಂದರೆ ಸಾಕು ಎಲ್ಲೆಲ್ಲೂ ಹುಲಿವೇಷಗಳ ಧಾರಿಗಳ ದರ್ಬಾರ್ ಆರಂಭವಾಗುತ್ತದೆ. ಪಂಜಾಗಳಿಗೆ ಹರಕೆ ಹೊತ್ತವರು ಈ ರೀತಿ ಹುಲಿವೇಷ ಮೈಮೇಲೆ ಬರೆಸಿಕೊಂಡು ಹರಕೆ ತೀರಿಸುತ್ತಾರೆ. ಬಾಲಕರಿಂದ ವೃದ್ಧರೂ ಬರೆಸಿಕೊಳ್ಳುತ್ತಾರೆ. ಪಂಜಾ (ದೇವರು) ಪ್ರತಿಷ್ಠಾಪನೆಯಾಗುವ ಆರಂಭದ ದಿನದಿಂದ ಐದು ದಿನಗಳವರೆಗೆ ಹುಲಿವೇಷ ಬರೆಸಿಕೊಂಡವರು ಊರಲ್ಲಿ ತಿರುಗಾಡಿ ಅಂಗಡಿಗಳ ಮಾಲೀಕರಿಂದ ಹಾಗೂ ಪರಿಚಯಸ್ಥರಿಂದ ಹಣ ಪಡೆಯುವುದು ವಾಡಿಕೆ.
‘ಮಗನಿಗೆ ಹುಲಿವೇಷ ಬರೆಸುತ್ತೇವೆ ಎಂದು ಬೇಡಿಕೊಂಡಿದ್ದೆವು. ಅದರಂತೆ ಮೂರು ವರ್ಷಗಳಿಂದ ಮಗನಿಗೆ ಹುಲಿವೇಷ ಬರೆಸುತ್ತಿದ್ದೇವೆ’ ಎಂದು ಸೋಮಣ್ಣ ಯತ್ನಳ್ಳಿ ಹೇಳುತ್ತಾರೆ.
ಹುಲಿವೇಷ ಬರೆಸಿಕೊಂಡವರು ಐದು ದಿನಗಳ ತನಕ ಹಲಿಗೆ ವಾದ್ಯದ ತಾಳಕ್ಕೆ ಹುಲಿಯಂತೆ ಕುಣಿಯುತ್ತಾರೆ. ಈ ಕುಣಿತ ನೋಡುವುದೇ ಮಕ್ಕಳಿಗೆ ಒಂದು ಭಾಗ್ಯ.
ಒಬ್ಬರು ಒಂದು ಹಲಿಗೆ ಬಾರಿಸುವವನನ್ನು ನೇಮಿಸಿಕೊಂಡರೆ ಆರ್ಥಿಕವಾಗಿ ಸ್ಥಿತಿವಂತರಾದವರು ಎರಡಕ್ಕಿಂತ ಹೆಚ್ಚು ಹಲಿಗೆ ಬಾರಿಸುವವರನ್ನು ನೇಮಿಸಿಕೊಳ್ಳುತ್ತಾರೆ. ಐದು ದಿನಗಳವರೆಗೆ ಊರಲ್ಲಿ ಹಲಿಗೆ ಸದ್ದು ತುಂಬಿಕೊಳ್ಳುತ್ತದೆ.
ಅಂದಾಜು ಮೂರುವರೆ ದಶಕಗಳ ಹಿಂದೆ ಪಟ್ಟಣದ ಕೆಇಬಿಯಲ್ಲಿ ನೌಕರಿ ಮಾಡುತ್ತಿದ್ದ ಹಾವೇರಿ ಮೂಲದ ಮಹಾದೇವಪ್ಪ ಎಂಬುವವರು ಒಂದೇ ಬಾರಿಗೆ ಹನ್ನೆರಡು ಹಲಿಗೆ ಬಾರಿಸುವವರನ್ನು ನೇಮಿಸಿಕೊಂಡು ಹಲಿಗೆಗಳ ನಾದಕ್ಕೆ ತಕ್ಕಂತೆ ಸೊಗಸಾಗಿ ಕುಣಿಯುತ್ತಿದ್ದುದನ್ನು ಇನ್ನೂ ಪಟ್ಟಣದ ಜನತೆ ಮರೆತಿಲ್ಲ. ಮೊಹರಂ ಬಂದಾಕ್ಷಣ ಲಕ್ಷ್ಮೇಶ್ವರದ ಜನತೆಗೆ ಈಗಲೂ ಹಾವೇರಿ ಮಹಾದೇವಪ್ಪನ ನೆನಪಾಗುತ್ತದೆ.
‘ಮಾದೇವಪ್ಪ ಹಾವೇರಿ ಹನ್ನೆರಡು ಹಲಿಗೆಗಳ ನಾದಕ್ಕೆ ತಕ್ಕಂತೆ ಕುಣಿಯುವುದನ್ನು ನೋಡುವುದೇ ನಮಗೆಲ್ಲ ಹಬ್ಬವಾಗಿತ್ತು. ಅಷ್ಟೊಂದು ಭರ್ಜರಿಯಾಗಿತ್ತು ಅವನ ಕುಣಿತಾ’ ಎಂದು ಹೆಸ್ಕಾಂನ ನಿವೃತ್ತ ನೌಕರ ಹಾಗೂ ಶಾರದಾ ಸಂಗೀತ ಕಲಾ ಬಳಗದ ಅಧ್ಯಕ್ಷ ನಾಗನಗೌಡ ಚಿಕ್ಕಣ್ಣವರ ನೆನಪಿಸಿಕೊಳ್ಳುತ್ತಾರೆ.
ಹುಲಿವೇಷ ಬರೆಯುವುದರಲ್ಲಿ ಮನೋಹರ ಬಹಳ ಸಿದ್ಧರು. ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಕುಂದಗೋಳ, ಸವಣೂರು ತಾಲ್ಲೂಕುಗಳಿಂದ ಹುಲಿವೇಷ ಬರೆಸಿಕೊಳ್ಳಲು ಇವರ ಹತ್ತಿರ ಬರುತ್ತಾರೆ.
ಐದು ದಿನಗಳವರೆಗೆ ಮನೋಹರ್ ಅವರಿಗೆ ಬಿಡುವಿಲ್ಲದ ಕೆಲಸ. ಹೆಂಡತಿ ಹಾಗೂ ಮಕ್ಕಳು ಹುಲಿವೇಷ ಬರೆಯುವ ಕಾಯಕದಲ್ಲಿ ತೊಡಗುತ್ತಾರೆ. ಈ ವರ್ಷವೂ ಸಹ ಮೊಹರಂ ಬಂದಿದ್ದು ಈಗಾಗಲೇ ಇವರ ಹತ್ತಿರ ಹುಲಿವೇಷ ಬರೆಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.