ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸುತ್ತಿದ್ದ ಜಾಲವನ್ನು ಭೇದಿಸಿರುವ ನಗರದ ಹಲಸೂರುಗೇಟ್ ಪೊಲೀಸರು ವಿ.ವಿಯ ದಿನಗೂಲಿ ನೌಕರರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಸಿಂಡಿಕೇಟ್ನ ಮಾಜಿ ಸದಸ್ಯ ಹಾಗೂ ಹಲವು ಉಪನ್ಯಾಸಕರು ಭಾಗಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದಲ್ಲಿ ದಿನಗೂಲಿ ನೌಕರರಾಗಿದ್ದ ಗಂಗಾಧರಯ್ಯ, ಬಸವರಾಜು ಹಾಗೂ ಮಧ್ಯವರ್ತಿ ಚಂದ್ರಶೇಖರ್ ಬಂಧಿತರು. ಸಿಂಡಿಕೇಟ್ನ ಮಾಜಿ ಸದಸ್ಯ ವೇದಮೂರ್ತಿ, ಉಪನ್ಯಾಸಕರಾದ ಪ್ರಭು ಉಪಾಸೆ, ಡಾ.ಕೊಟ್ರಯ್ಯ, ಸುರೇಶ್ ಮತ್ತಿತರರು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಈ ಅಕ್ರಮದ ಬಗ್ಗೆ ಪೊಲೀಸ್ ಮಾಹಿತಿದಾರರಿಂದ ಸುಳಿವು ಸಿಕ್ಕಿತ್ತು. ಆ ಮಾಹಿತಿ ಆಧರಿಸಿ ಹತ್ತು ದಿನಗಳ ಹಿಂದೆ ಗಂಗಾಧರಯ್ಯ, ಬಸವರಾಜು ಮತ್ತು ಚಂದ್ರಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಹಣ ಕೊಟ್ಟ ವಿದ್ಯಾರ್ಥಿಯ ನೋಂದಣಿ ಸಂಖ್ಯೆಯ ವಿವರವನ್ನು ಪಡೆದುಕೊಳ್ಳುತ್ತಿದ್ದರು. ನಂತರ ಆ ನೋಂದಣಿ ಸಂಖ್ಯೆಯ ಉತ್ತರಪತ್ರಿಕೆಗೆ ಮೌಲ್ಯಮಾಪಕರಿಂದ ಹೆಚ್ಚಿನ ಅಂಕಗಳನ್ನು ಹಾಕಿಸುತ್ತಿದ್ದರು. ಅಲ್ಲದೇ, ಮೌಲ್ಯಮಾಪನದ ನಂತರ ಅಂಕಗಳನ್ನು ತಿದ್ದಿಸಿ ಹೆಚ್ಚು ಅಂಕ ಹಾಕಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳಿಂದ ಪಡೆದ ಹಣದಲ್ಲಿ ಮೌಲ್ಯಮಾಪಕರಿಗೂ ಪಾಲು ಕೊಡುತ್ತಿದ್ದರು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಜೆಪಿ ಮುಖಂಡರಾದ ವೇದಮೂರ್ತಿ ಅವರು ಮಾಗಡಿ ಮುಖ್ಯರಸ್ತೆಯ ಬಳಿ ಖಾಸಗಿ ಕಾಲೇಜು ನಡೆಸುತ್ತಿದ್ದಾರೆ. ಕೊಟ್ರಯ್ಯ ಅವರು ರಾಜಾಜಿನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಬಂಧಿತರ ವಿರುದ್ಧ ವಂಚನೆ, ನಕಲಿ ದಾಖಲೆಪತ್ರಗಳ ಸೃಷ್ಟಿ, ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆಪತ್ರಗಳ ಸೃಷ್ಟಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.