ಎಚ್.ಎಸ್.ಶಿವಪ್ರಕಾಶ್ ಅವರ ‘ಪ್ರತಿಸ್ಪಂದನ’ ಅಂಕಣದಲ್ಲಿರುವ (ಪ್ರ.ವಾ., ಜೂ. 20.) ಎರಡು ಹೇಳಿಕೆಗಳ ಬಗ್ಗೆ ನಮಗೆ
ಆಕ್ಷೇಪವಿದೆ:
1) ಪೆರಿಯಾರ್ ಬಗ್ಗೆ ಬರೆಯುತ್ತ ಅವರು ‘ಪಶ್ಚಿಮದ ಬುದ್ಧಿ’ ಎಂಬ ಪದ ಬಳಸಿದ್ದಾರೆ. ಇದು, ತಮಗಾಗದ ವಿಚಾರಗಳನ್ನು
ಹೊಂದಿದವರನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಲು ಬಳಸಲಾಗುವ ‘ಮೆಕಾಲೆ, ಮಾರ್ಕ್ಸ್ ಸಂತಾನ’ ಎಂಬ ಪದಪ್ರಯೋಗದ ಹಾಗೆ ಇದೆ. ಹಾಗೆ ನೋಡಿದರೆ ನಮ್ಮಲ್ಲಿ ಯಾರು ‘ಪಶ್ಚಿಮದ ಬುದ್ಧಿ’ಯವರಲ್ಲ? ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಭೂತ’ ಕವಿತೆಯಲ್ಲಿ ‘ಪುರೋಹಿತರ ನೆಚ್ಚಿ ಪಶ್ಚಿಮ ಬುದ್ಧಿಯಾದೆವೋ/ ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು’ ಎನ್ನುತ್ತಾರೆ. ಅಡಿಗರ ಈ ಮಾತಿನ ಬಗ್ಗೆಯೂ ಭಿನ್ನಮತ ಸಾಧ್ಯವಿದೆ. ಆದರೆ ಅಡಿಗರು ಆ ಎರಡು ಸಾಲುಗಳ ಮಿತಿಯಲ್ಲೇ ‘ಪಶ್ಚಿಮದ ಬುದ್ಧಿ’ ಎನ್ನುವುದಕ್ಕೆ ಸಂದರ್ಭ ಮತ್ತು ವಿವರಣೆಗಳನ್ನು ಒದಗಿಸುತ್ತಾರೆ. ಶಿವಪ್ರಕಾಶ್ರ ಲೇಖನದಲ್ಲಿ ಆ ಜವಾಬ್ದಾರಿ ಇಲ್ಲ.
2) ತಮ್ಮ ಲೇಖನದ ಕೊನೆಯಲ್ಲಿ ‘ಇನ್ನಾದರೂ ಮೂರ್ತಿಗಳ ಮೇಲೆ ಉಚ್ಚೆ ಹೊಯ್ದು ಹುಡುಗಾಟದ ಪರಾಕ್ರಮಗಳನ್ನು ವಿಜೃಂಭಿಸುವ ಬೇಜವಾಬ್ದಾರಿ ತೀಟೆಗಳನ್ನು ನಮ್ಮ ಬುದ್ಧಿಜೀವಿಗಳು ಕೈಬಿಡಲಿ...’ ಎಂದು ಶಿವಪ್ರಕಾಶ್ ಯಾರನ್ನು ಉದ್ದೇಶಿಸಿ ಬರೆದಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಆದರೆ ಮಾತಿನ ವಿವರ, ಸಂದರ್ಭ ನೋಡಿದರೆ ಅನಂತಮೂರ್ತಿಯವರ ‘ಬೆತ್ತಲೆಪೂಜೆ ಯಾಕೆ ಕೂಡದು?’ ಪ್ರಬಂಧದಲ್ಲಿರುವ ಒಂದು ಹೇಳಿಕೆಯ ಬಗ್ಗೆ ಇತ್ತೀಚೆಗೆ, ಎಬ್ಬಿಸಲಾಗಿರುವ ವಿವಾದವನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದಿರಬಹುದು ಎನಿಸುತ್ತದೆ.
ನಮ್ಮ ಊಹೆ ನಿಜವಾಗಿದ್ದಲ್ಲಿ, ಶಿವಪ್ರಕಾಶ್ ಅನಂತಮೂರ್ತಿಯವರನ್ನು ಹೆಸರಿಸಿ, ಅವರ ಹೇಳಿಕೆಯನ್ನು ಹೊಂದಿರುವ ಪ್ಯಾರಾ ಯಥಾವತ್ತಾಗಿ ಉದ್ಧರಿಸಿ, ನಂತರ ತಮ್ಮ ಅನಿಸಿಕೆಯನ್ನು ಹೇಳಬೇಕಿತ್ತು. -ಇದು ವಾಗ್ವಾದದ ಸರಿಯಾದ ವಿಧಾನ. ಇದ್ಯಾವುದನ್ನೂ ಮಾಡದ ಶಿವಪ್ರಕಾಶ್ ಮರೆಯಲ್ಲಿ ನಿಂತು ಅನಂತಮೂರ್ತಿಯವರ ಮೇಲೆ ಕಲ್ಲು ತೂರಿದ್ದಾರೆ. ಇದು ‘ಬೇಜವಾಬ್ದಾರಿ’ಯದ್ದೂ ಹಾಗೂ ‘ಸ್ವವಿಮರ್ಶಾ ವಿಕಾಸಶೀಲ ಪರಂಪರೆ’ಗೆ ವ್ಯತಿರಿಕ್ತವಾದದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.