ಬೆಂಗಳೂರು: ಎಚ್ಎಸ್ಆರ್ ಲೇಔಟ್ ಸಮೀಪದ ದೊಡ್ಡಕನ್ನಹಳ್ಳಿಯಲ್ಲಿ ಶುಕ್ರವಾರ ವಂದನಾ (20) ಎಂಬ ಯುವತಿ ಅನುಮಾನಾಸ್ಪದ ವಾಗಿ ಮೃತಪಟ್ಟಿದ್ದು, ದುಷ್ಕರ್ಮಿಗಳು ಅವರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮಾಲ್ ಒಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ವಂದನಾ ಅವರು ಕುಟುಂಬ ಸದಸ್ಯರೊಂದಿಗೆ ದೊಡ್ಡಕನ್ನಹಳ್ಳಿಯ ಶೆಡ್ನಲ್ಲಿ ವಾಸವಾಗಿದ್ದರು. ಅವರ ತಂದೆ ವೆಂಕಟಪ್ಪ ಮತ್ತು ತಾಯಿ ಭವಾನಿ ಅವರು ಕೂಲಿ ಕಾರ್ಮಿಕರಾಗಿದ್ದಾರೆ.
ಕುಟುಂಬ ಸದಸ್ಯರೆಲ್ಲಾ ಗುರುವಾರ ಸಂಜೆ ಕೋಲಾರದಲ್ಲಿ ನಡೆದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿದ್ದರು. ವಂದನಾ ಅನಾರೋಗ್ಯದ ಕಾರಣದಿಂದಾಗಿ ಮದುವೆಗೆ ಹೋಗದೆ ಒಬ್ಬರೇ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ನಸುಕಿನಲ್ಲಿ ಶೆಡ್ನ ಹಿಂಭಾಗದ ಶೌಚಾಲಯದಲ್ಲಿ ವಂದನಾ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಶೆಡ್ಗಳ ನಿವಾಸಿಗಳು ಅವರ ಚೀರಾಟ ಕೇಳಿ ಶೌಚಾಲಯದ ಬಳಿ ಹೋದಾಗ ಅವರಿಗೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ನಂತರ ಸ್ಥಳೀಯರು ಬೆಂಕಿ ನಂದಿಸಿ ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ತೀವ್ರ ಸುಟ್ಟ ಗಾಯಗಳಿಂದಾಗಿ ವಂದನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಇದು ಆತ್ಮಹತ್ಯೆಯೇ ಅಥವಾ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ. ಘಟನೆ ಸಂಬಂಧ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.