ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದ ಸ್ವಾಯತ್ತತೆ ಉಳಿಯಲಿ

Last Updated 16 ಜನವರಿ 2013, 19:59 IST
ಅಕ್ಷರ ಗಾತ್ರ

ಮೈಸೂರಿನ ರಂಗಾಯಣ ಬಿ.ವಿ.ಕಾರಂತರ ಕನಸು. 1989ರಲ್ಲಿ ಆರಂಭವಾದ ರಂಗಾಯಣಕ್ಕೆ ಈಗ ರಜತ ಮಹೋತ್ಸವದ ಸಂಭ್ರಮ. ರಾಜ್ಯ ಸರ್ಕಾರ ಈ ಸಂಭ್ರಮವನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕು. ಅದರ ಬದಲಾಗಿ ಸರ್ಕಾರ ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿ ರಂಗಾಸಕ್ತರ ಕೆಂಗಣ್ಣಿಗೆ ಗುರಿಯಾಯಿತು. ರಂಗಾಯಣದ ಆರ್ಥಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಯನ್ನು ಉಪ ನಿರ್ದೇಶಕರಿಗೆ ವಹಿಸಿ ರಾಜ್ಯ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು.

ಇದನ್ನು ರಾಜ್ಯದ ಎಲ್ಲ ಹಿರಿಯ ರಂಗಕರ್ಮಿಗಳು ವಿರೋಧಿಸಿದರು. ರಂಗ ಕಲಾವಿದರು ಪ್ರತಿಭಟನೆಯ ಮಾರ್ಗವನ್ನೂ ಹಿಡಿದರು. ಇದಕ್ಕೆ ಮಣಿದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು, `ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನು ವರ್ಗಾಯಿಸಬಾರದು. ಅದು ರಂಗಾಯಣದ ಸ್ವಾಯತ್ತತೆಗೆ ಧಕ್ಕೆ ತರುವ ಕ್ರಮ. ಅಲ್ಲದೆ ರಂಗಾಯಣದ ಮೂಲ ಉದ್ದೇಶಕ್ಕೆ ತಡೆಯಾಗುತ್ತದೆ' ಎಂದು ಹೇಳಿ ಆದೇಶ ವಾಪಸು ಪಡೆಯುವಂತೆ ಸೂಚಿಸಿರುವುದು ಸ್ವಾಗತಾರ್ಹ ನಿರ್ಧಾರ. ರಜತ ಮಹೋತ್ಸವ ಆಚರಿಸುತ್ತಿರುವ ರಂಗಾಯಣ,  ದೇಶದ ಏಕೈಕ ಸರ್ಕಾರಿ ಪ್ರಾಯೋಜಿತ ರೆಪರ್ಟರಿ. ಬಿ.ವಿ.ಕಾರಂತರ ನಂತರ ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮುಂತಾದವರು ರಂಗಾಯಣವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದಾರೆ.

ಕಳೆದ 24 ವರ್ಷಗಳಲ್ಲಿ ಯಾವುದೇ ಸರ್ಕಾರ ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನು ಮೊಟಕುಗೊಳಿಸುವ ಅಥವಾ ಕಡಿವಾಣ ಹಾಕುವ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗಿನ ಸರ್ಕಾರ ತನ್ನ ಕೊನೆಯ ಕಾಲದಲ್ಲಿ ಇಂತಹ ಪ್ರಯತ್ನಕ್ಕೆ ಕೈಹಾಕಿದ್ದು ಸರ್ವಥಾ ಸಲ್ಲ.

ಸರ್ಕಾರದ ಆರ್ಥಿಕ ನೆರವಿನಿಂದ ಇದು ನಡೆಯುತ್ತಿರುವುದು ನಿಜವಾದರೂ ಸರ್ಕಾರಿ ಸಂಸ್ಥೆಯಂತೆ ಇದನ್ನು ನಡೆಸಿಕೊಳ್ಳುವುದು ತರವಲ್ಲ. ಇದೊಂದು ಸಂಸ್ಕೃತಿ ಪ್ರಚಾರಕ ಸಂಸ್ಥೆ. ಅದನ್ನು ಹಾಗೆಯೇ ಉಳಿಸಿಕೊಳ್ಳಲು ಸರ್ಕಾರ ಬಯಸಬೇಕು. ಅದಕ್ಕೆ ಉತ್ತೇಜನವನ್ನೂ ನೀಡಬೇಕು. ಅದರ ಸ್ವಾಯತ್ತತೆಗೆ ಧಕ್ಕೆ ತರುವ ಅಥವಾ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಸರ್ಕಾರಿ ಅಧಿಕಾರಿಗಳಿಗೆ ಸಾಮಾನ್ಯವಾಗಿ ಎಲ್ಲ ಕಡೆ ಹಸ್ತಕ್ಷೇಪ ಮಾಡುವ ಹವ್ಯಾಸವಿದೆ.

ಹಾಗೆಯೇ ಇಲ್ಲಿಯೂ ಆಗಿದೆ. ಇದರಲ್ಲಿ ಸಾಂಸ್ಕೃತಿಕ ದಲ್ಲಾಳಿಗಳ ಕೈವಾಡ ಕೂಡ ಇದೆ. ಇದಕ್ಕೆ ಸರ್ಕಾರ ಮಣಿಯಬಾರದು. ಸರ್ಕಾರ ಕೊಟ್ಟ ಹಣವನ್ನು ಸರಿಯಾಗಿ ಉಪಯೋಗಿಸಿಕೊಂಡು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ರಂಗಾಯಣ ಕೆಲಸ ಮಾಡಬೇಕು. ರಂಗಾಯಣಕ್ಕೆ ವಿಶೇಷ ಅತಿಥಿಗಳನ್ನು ಕರೆಸುವಾಗ, ಬೇರೆ ಕಡೆಯ ನಾಟಕ ತಂಡಗಳಿಗೆ ಆಹ್ವಾನ ನೀಡುವಾಗ, ಹೊಸ ನಾಟಕವನ್ನು ಸಂಯೋಜಿಸುವಾಗ ಸರ್ಕಾರಿ ಅಧಿಕಾರಿಗಳ ಮರ್ಜಿಗೆ ಕಾಯುವಂತಹ ಸ್ಥಿತಿ ನಿರ್ದೇಶಕರಿಗೆ ಬರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT