ನವದೆಹಲಿ (ಪಿಟಿಐ): ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿರುವ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ವಿರುದ್ಧ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಎನ್ಡಿಎ ಮಿತ್ರಪಕ್ಷವಾದ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರನ್ನು ಸೋಮವಾರ ಪೊಲೀಸರು ಬಂಧಿಸಿದರು.
ಜಂತರ್ ಮಂತರ್ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವೈಕೊ ಅವರು `ರಾಜಪಕ್ಸೆ ಅವರ ಉಪಸ್ಥಿತಿಯಿಂದ ಮೋದಿ ಅವರ ಪ್ರಮಾಣವಚನ ಸಮಾರಂಭದ ಪಾವಿತ್ರ್ಯತೆ ಮಲಿನವಾಗುತ್ತದೆ' ಎಂದು ಹೇಳಿದರು.
ರಾಜಪಕ್ಸೆ ಅವರ ವಿರುದ್ಧ ಶ್ರೀಲಂಕಾದಲ್ಲಿ ತಮಿಳರನ್ನು ಹತ್ಯೆ ಮಾಡಿದ ಆರೋಪವಿದೆ ಎಂದು ಆಪಾದಿಸಿದರು. ಇದೇ ವೇಳೆ, ವೈಕೊ ಅವರು ನಾನು ಎನ್ಡಿಎ ಸರ್ಕಾರದ ವಿರೋಧಿ ಅಲ್ಲ ಎಂದು ಹೇಳಿ ಮೋದಿ ಅವರಿಗೆ ಅಭಿನಂದನೆ ತಿಳಿಸಿದರು.