ಬೆಂಗಳೂರು: ‘ಭಾರತದಲ್ಲಿ ಕಲೆಗಳಿಗೆ ರಾಜರ ಪ್ರೋತ್ಸಾಹ ಹೆಚ್ಚಾಗಿತ್ತು. ಹೈದರಾಬಾದ್ ನಿಜಾಮರ ಆಶ್ರಯದಲ್ಲಿದ್ದ ರಾಜಾ ದೀನ್ ದಯಾಳ್ ಅವರ ಛಾಯಾಚಿತ್ರಗಳಲ್ಲಿ ಇತಿಹಾಸ ದಾಖಲಾಗಿದೆ’ ಎಂದು ಲೇಖಕ ರಾಮಚಂದ್ರ ಗುಹಾ ಹೇಳಿದರು.
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ನಲ್ಲಿ ಶನಿವಾರದಿಂದ ಆಯೋಜಿಸಿರುವ ರಾಜಾ ದೀನ್ ದಯಾಳ್ ಅವರ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ನಿಜಾಮರ ಪ್ರೋತ್ಸಾಹ ಹೆಚ್ಚಾಗಿತ್ತು. ಅದೇ ರೀತಿ ಇತರೆ ಕಲೆಗಳಿಗೂ ರಾಜಾಶ್ರಯದಿಂದ ಹೆಚ್ಚು ಅನುಕೂಲವಾಗಿದೆ’ ಎಂದರು.
‘ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು 1989ರಲ್ಲಿ ದೀನ್ ದಯಾಳ್ ಅವರ ಕುಟುಂಬ ಸದಸ್ಯರಿಂದ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿದೆ. ಈವರೆಗೆ ದೆಹಲಿ, ಮುಂಬೈ, ಭೋಪಾಲ್, ಗುವಾಹಟಿ, ಕೋಲ್ಕತ್ತಾ ಸೇರಿ ಅನೇಕ ಕಡೆ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಪ್ರಾದೇಶಿಕ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮ್ ಸಂಪತ್ ಹೇಳಿದರು.
1880ರಲ್ಲಿ ತೆಗೆದಿರುವ ವಿಜಾಪುರದ ಬಾರಾ ಕಮಾನು, ಗುಲ್ಬರ್ಗದ ಕೋಟೆಬೀದಿ, 1890ರಲ್ಲಿ ತೆಗೆದಿರುವ ಗುಲ್ಬರ್ಗದ ಮಹಾ ಕಮಾನಿನ ಛಾಯಾಚಿತ್ರಗಳು, ಹೈದರಾಬಾದ್ ನಿಜಾಮರ ಕುಟುಂಬ ಸದಸ್ಯರ ಛಾಯಾಚಿತ್ರಗಳು, ಬ್ರಿಟಿಷ್ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಛಾಯಾಚಿತ್ರಗಳು ಸೇರಿ 168 ಅಪರೂಪದ ಛಾಯಾಚಿತ್ರಪ್ರದರ್ಶನದಲ್ಲಿವೆ. ಪ್ರದರ್ಶನಕ್ಕೆ ಪ್ರವೇಶ ಉಚಿತ. ಜುಲೈ 20ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ವೀಕ್ಷಣೆಗೆ ಮುಕ್ತವಾಗಿರಲಿದೆ.