ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ರಾಜ್ಯದಲ್ಲಿ ನಡೆಯುತ್ತಿರುವುದು ಇದು ಐದನೇ ಬಾರಿ.
1967ರಲ್ಲಿ ಜನಸಂಘದ ಕಾರ್ಯಕಾರಿಣಿ ಹುಬ್ಬಳ್ಳಿಯಲ್ಲಿ ನಡೆದಿತ್ತು. ಅದರ ನಂತರ ಬಿಜೆಪಿಯ ಕಾರ್ಯಕಾರಿಣಿ 1982, 1993, 1998, 2009ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ಎಂದು ಪಕ್ಷದ ಮುಖಂಡ ಸಿ.ಟಿ.ರವಿ ತಿಳಿಸಿದರು.
ಸುಸಜ್ಜಿತ ಮಾಧ್ಯಮ ಕೇಂದ್ರ: ಲಲಿತ್ ಅಶೋಕ ಹೋಟೆಲ್ನಲ್ಲಿ ಕಾರ್ಯಕಾರಿಣಿ ನಡೆದರೂ ಮಾಧ್ಯಮ ಗೋಷ್ಠಿಗೆ ವ್ಯವಸ್ಥೆ ಮಾಡಿರುವುದು ರಾಜಭವನ ರಸ್ತೆಯ ಕ್ಯಾಪಿಟಲ್ ಹೋಟೆಲ್ನಲ್ಲಿ. ಅಲ್ಲಿ 50 ಕಂಪ್ಯೂಟರ್ ಇಟ್ಟು, ಅವುಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬರುವ ಪತ್ರಕರ್ತರ ಅನುಕೂಲಕ್ಕಾಗಿ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಿದ್ದು, ಅದಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.
ಮಾಧ್ಯಮ ಕೇಂದ್ರದಲ್ಲಿ ವೈ–ಫೈ ವ್ಯವಸ್ಥೆ ಕೂಡ ಮಾಡಲಾಗಿದೆ. ಇದರ ಪೂರ್ಣ ಉಸ್ತುವಾರಿಯನ್ನು ಪಕ್ಷದ ಮಾಧ್ಯಮ ಮುಖ್ಯಸ್ಥ ಎಸ್.ಪ್ರಕಾಶ್ ಅವರಿಗೆ ವಹಿಸಲಾಗಿದೆ. ಐವರು ಸಾಫ್ಟ್ವೇರ್ ಎಂಜನಿಯರ್ಗಳು ಇಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಗಣ್ಯರಿಗೆ ಎರಡು ಹೋಟೆಲ್: ಕಾರ್ಯಕಾರಿಣಿಗೆ ಬರುವ ಅತಿಥಿಗಳಿಗೆ ಲಲಿತ್ ಅಶೋಕ ಮತ್ತು ಲೀ ಮೆರಿಡಿಯನ್ ಹೋಟೆಲ್ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳಿಗೆ ಕ್ಯಾಪಿಟಲ್ ಹೋಟೆಲ್ನಲ್ಲಿ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಗಣ್ಯರ ಭದ್ರತಾ ಸಿಬ್ಬಂದಿಗೆ ಸ್ವಾತಿ ಹೋಟೆಲ್ನಲ್ಲಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.