ರಾಣೆಬೆನ್ನೂರು (ಹಾವೇರಿ ಜಿಲ್ಲೆ): ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಣೆಬೆನ್ನೂರಿನಲ್ಲಿ ಆಯೋಜಿಸಲು ಭಾನು ವಾರ ಇಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪೂರ್ವಭಾವಿ ಸಭೆ ನಿರ್ಧರಿಸಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಮಾಸಣಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಷತ್ತಿನ ಐದು ತಾಲ್ಲೂಕು ಘಟಕಗಳ ಅಧ್ಯಕ್ಷರು, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಹಲವು ಸದಸ್ಯರು ಭಾಗವಹಿಸಿದ್ದರು. ಎರಡು ತಾಲ್ಲೂಕು ಘಟಕಗಳ ಅಧ್ಯಕ್ಷರು ಗೈರಾಗಿದ್ದರು.
ಸಮ್ಮೇಳ ನದ ಸ್ಥಳ ನಿಗದಿ ನಿರ್ಣಯ ಅಂಗೀಕರಿಸಿದ ಸಭೆಯು, ಜನವರಿಯಲ್ಲಿ ಸಮ್ಮೇಳನ ಆಯೋಜನೆ, ಸಿದ್ಧತೆ ಹಾಗೂ ಮುಂದಿನ ರೂಪುರೇಷೆಗಳ ಬಗ್ಗೆ ಶಾಸಕ ಕೆ.ಬಿ ಕೋಳಿವಾಡ ನೇತೃತ್ವದಲ್ಲಿ ಚರ್ಚಿಸಲು ನಿರ್ಧರಿಸಿತು. ಸ್ಥಳ ನಿಗದಿಗಾಗಿ ಹಾವೇರಿ ಹಾಗೂ ರಾಣೆಬೆನ್ನೂರು ನಡುವೆ ಪೈಪೋಟಿ ಏರ್ಪಟ್ಟಿದ್ದ ಕಾರಣ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.