ಹಿಸ್ಸಾರ್, ಹರಿಯಾಣ (ಪಿಟಿಐ): ತಲೆಮರೆಸಿಕೊಂಡಿರುವ ವಿವಾದಾತ್ಮಕ ಧಾರ್ಮಿಕ ಗುರು ರಾಮ್ಪಾಲ್ (63) ಬಂಧನಕ್ಕಾಗಿ ಇಲ್ಲಿರುವ ಅವರ ಆಶ್ರಮಕ್ಕೆ ತೆರಳಿದ ಪೊಲೀಸರ ಮೇಲೆ ಅವರ ಬೆಂಬಲಿಗರು ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಹಿಸ್ಸಾರ್ ಜಿಲ್ಲೆಯಲ್ಲಿರುವ ರಾಮ್ಪಾಲ್ ಆಶ್ರಮದ ಬಳಿ ಈ ಘಟನೆ ನಡೆದಿದೆ. ಆಶ್ರಮದ ಒಂದು ಬದಿಯ ಗೋಡೆ ಒಡೆದು ಅರಸೇನಾ ಪಡೆ ಒಳನುಗ್ಗಿತು. ಬಳಿಕ ಬೆಂಬಲಿಗರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಯಿತು. ಈ ಸಂದರ್ಭದಲ್ಲಿ ರಾಮ್ಪಾಲ್ ಅವರ ಖಾಸಗಿ ಅಂಗರಕ್ಷಕ ಪಡೆ ಗುಂಡಿನ ದಾಳಿ ನಡೆಸಿತು.
ಆಶ್ರಮದೊಳಗೆ ಸಾವಿರಾರು ಶಸ್ತ್ರಸಜ್ಜಿತ ಬೆಂಬಲಿಗರು ಸೇರಿಕೊಂಡಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಬಹುದು ಎಂದು ಮೂಲಗಳು ತಿಳಿಸಿವೆ.
ಹಿನ್ನಲೆ: ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಸೋಮವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ರಾಮ್ಪಾಲ್ ಹಾಜರಾಗಬೇಕಿತ್ತು. ಆದರೆ, ಅವರು ಚಿಕಿತ್ಸೆ ಹೆಸರಿನಲ್ಲಿ ರಹಸ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು. ಹೀಗಾಗಿ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ರಾಮ್ಪಾಲ್ ಅವರನ್ನು ಶುಕ್ರವಾರದೊಳಗೆ ಹಾಜರುಪಡಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೆ, ರಾಮ್ಪಾಲ್ ಇನ್ನಷ್ಟು ಸಮಯ ನೀಡಿ ಎನ್ನುವ ಕಾರಣ ಒಡ್ಡುತ್ತಾ ಪ್ರತಿಬಾರಿಯೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ.
ಇಕ್ಕಟ್ಟಿಗೆ ಸಿಲುಕಿರುವ ಹರಿಯಾಣ ಸರ್ಕಾರ ರಾಮ್ಪಾಲ್ ಬಂಧನಕ್ಕೆ ಕೇಂದ್ರದ ನೆರವು ಕೋರಿದೆ. ಅವರ ಮೇಲೆ ನಿಗಾ ಇರಿಸುವುದಕ್ಕೆ ಚಾಲಕರಹಿತ ವಿಮಾನ ಒದಗಿಸುವಂತೆಯೂ ಕೋರಿದೆ.