ಬಲಿಯಾ, ಉತ್ತರ ಪ್ರದೇಶ (ಪಿಟಿಐ): ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಿಂದಡಿ ಇಟ್ಟಿಲ್ಲ ಎಂದು ಒತ್ತಿ ಹೇಳಿರುವ ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಅಧೀರ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದಿದ್ದಾರೆ.
ದುಹಾ ಬಿಹ್ರಾ ಗ್ರಾಮದಲ್ಲಿ ಸೋಮವಾರ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
'ರಾಮ ಮಂದಿರ ನಿರ್ಮಾಣ ವಿಚಾರದಿಂದ ಬಿಜೆಪಿ ಸರ್ಕಾರ ಹಿಂದೆ ಸರಿದಿಲ್ಲ. ಅದು ನಮ್ಮ ಪ್ರಣಾಳಿಕೆಯಲ್ಲಿ ಇಲ್ಲದಿರಬಹುದು. ಆದರೆ ಅದು ನಮ್ಮ ಗೌರವ ಹಾಗೂ ಪ್ರತಿಷ್ಠೆಯ ವಿಷಯವಾಗಿದೆ' ಎಂದು ಅವರು ನುಡಿದರು. ಅಲ್ಲದೇ 'ಪರ್ಯಾಯ ಮಾರ್ಗದ ಮೂಲಕ ಅದನ್ನು ಕಟ್ಟಲಾಗುವುದು' ಎಂದೂ ಅವರು ತಿಳಿಸಿದ್ದಾರೆ.
'ಈ ನಿಟ್ಟಿನಲ್ಲಿ ಸಾಧುಗಳು ಹಾಗೂ ಮಹಾಂತರು ತಮ್ಮ ಕೆಲಸ ಮಾಡುತ್ತಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ನಾಯಕರೂ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಯಾವಾಗ ಕಟ್ಟಿದರೂ ಅಯೋಧ್ಯೆಯಲ್ಲಿ ಮಂದಿರವೇ ನಿರ್ಮಾಣವಾಗಲಿದೆಯೆ ಹೊರತು ಮಸೀದಿಯಲ್ಲ' ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮತ್ತಷ್ಟು ಪ್ರಶ್ನಿಸಿದಾಗ, 'ರಾಮ ಮಂದಿರ ವಿಷಯದ ಬಗ್ಗೆ ಯಾವಾಗಲೂ ಮಾತನಾಡುತ್ತಲೇ ಇರುವುದು ಸರಿಯಲ್ಲ. ಆದರೆ ಪರ್ಯಾಯ ಮಾರ್ಗದ ಮೂಲಕ ಅದನ್ನು ನಿರ್ಮಿಸಲು ನಿರ್ಧರಿಸಲಾಗಿದೆ' ಎಂದು ಸಂಕ್ಷಿಪ್ತವಾಗಿ ನುಡಿದರು.