ಕೊಚ್ಚಿ (ಐಎಎನ್ಎಸ್): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ‘ವಿದೂಷಕ’ ಎಂದು ಕೇರಳ ಕಾಂಗ್ರೆಸ್ ಮುಖಂಡ ಟಿ.ಎಚ್.ಮುಸ್ತಫಾ ಅವರು ಮೂದಲಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಹುದ್ದೆಗೇರುವುದೆಂದರೆ ಮಕ್ಕಳಾಟವಲ್ಲ. ಚುನಾವಣೆ ಸಂದರ್ಭದಲ್ಲಿ ರಾಹುಲ್ ಒಬ್ಬ ವಿದೂಷಕನಂತೆ ವರ್ತಿಸಿದರು. ಇದನ್ನು ಅರಿತ ಜನ ಪಕ್ಷವನ್ನು ಹೀನಾಯವಾಗಿ ಸೋಲಿಸಿದರು’ ಎಂದು ಆರೋಪಿಸಿದ್ದಾರೆ.
‘ಸೋಲಿನ ಹೊಣೆ ಹೊತ್ತು ಅವರು ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸ್ವತಃ ಅವರೇ ಈ ಕೆಲಸ ಮಾಡದಿದ್ದರೆ ಪಕ್ಷವೇ ಅವರನ್ನು ಈ ಸ್ಥಾನದಿಂದ ತೆರವುಗೊಳಿಸಬೇಕು. ಅದಾಗದಿದ್ದಲ್ಲಿ ಪ್ರಿಯಾಂಕಾ ವಾಧ್ರಾ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ರಾಹುಲ್ ಅವರು ಅಂತರ್ಜಾಲ ಮತ್ತು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಚಾರ ಕಾರ್ಯಕ್ಕೆ ಇಳಿದರು. ಅವರ ಜತೆಗಿದ್ದವರು ಸಹ ಅವರ ಶೈಲಿಯನ್ನು ಹೊಗಳಿದರು. ಇದರಿಂದ ಪಕ್ಷಕ್ಕೆ ಹಿನ್ನಡೆ ಉಂಟಾಯಿತು. ನಮ್ಮ ದೌರ್ಭಾಗ್ಯವೆಂದರೆ ಎ.ಕೆ.ಆಂಟನಿ ಅವರೂ ರಾಹುಲ್ ಬೆನ್ನಿಗೆ ನಿಂತರು’ ಎಂದು ಮುಸ್ತಫಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.