‘ನೊಗಕ್ಕೆ ಹೆಗಲು...’ ಎಂಬ ಶೀರ್ಷಿಕೆಯೊಂದಿಗೆ, ರೈತರು ಎಡತಾಕಿ ಎಳೆಯುವ ಚಿತ್ರವೊಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ (ಪ್ರ.ವಾ., ಜೂನ್ 21). ಮುಂಗಾರು ಮಳೆ ಬಿದ್ದು, ಬಿತ್ತನೆ ಕೆಲಸ ಆರಂಭವಾಗುವ ಸಂದರ್ಭದಲ್ಲಿ ಹಸಿಯಾಗುವ ಹೊಲಗಳು ಹಾಗೂ ರೈತರ ಕೃಷಿ ಚಟುವಟಿಕೆಗಳ ನೈಜ ಚಿತ್ರಣ ಕೊಡುವ ಇಂಥ ಚಿತ್ರಗಳು ಒಂದರ್ಥದಲ್ಲಿ ದೃಶ್ಯಕಾವ್ಯಗಳೆ. ಆದರೆ, ಚಿತ್ರದ ಕೆಳಗೆ ಹತ್ತಿ ಬಿತ್ತನೆಗಾಗಿ ರೈತರು ಎತ್ತುಗಳ ಬದಲಿಗೆ ತಾವೇ ನೊಗಕ್ಕೆ ಹೆಗಲು ಕೊಟ್ಟು ಎಡತಾಕಿ ಹೊಡೆಯುತ್ತಿರುವ ದೃಶ್ಯ ಕಂಡುಬಂದಿತು ಎಂಬ ಮಾಹಿತಿ ಪ್ರಕಟವಾಗಿದೆ.
ಎಡತಾಕಿಯನ್ನು ಎಳೆಯಲು ರೈತರು ಅಪ್ಪಿತಪ್ಪಿಯೂ ಎತ್ತುಗಳನ್ನು ಹೂಡುವುದಿಲ್ಲ ಹಾಗೂ ಅವರು ಹೆಗಲಿನ ಮೇಲೆ ಹೊತ್ತದ್ದು ನೊಗವೂ ಅಲ್ಲ. ಅದು ತೆಳ್ಳನೆ ಕಟ್ಟಿಗೆಯ ಅಥವಾ ಬಿದಿರಿನ ಹಗುರವಾದ ಎಳೆ. ಎಡತಾಕಿ ಎಂಬ ಕೃಷಿ ಪರಿಕರವನ್ನು ಮನುಷ್ಯರೇ ಎಳೆದು ಕತ್ತರಿಯ (ಕ್ರಾಸ್) ರೀತಿಯಲ್ಲಿ ಸಾಲುಗಳನ್ನು ಮಾಡುತ್ತಾರೆ. ಎರಡು ಗೆರೆಗಳು ಕೂಡುವ ಜಾಗದಲ್ಲಿ ಬೀಜ ಅಥವಾ ಸಸಿಯನ್ನು ಊರಲು ಇದು ಅನುಕೂಲ. ಇದರಿಂದ ಬೀಜಗಳನ್ನು ಸಮಾನ ಅಂತರದಲ್ಲಿ ಬಿತ್ತಲು ಸಾಧ್ಯ.
ಹಸಿ ಹೊಲದಲ್ಲಿ ಅನಗತ್ಯವಾಗಿ ಎತ್ತುಗಳನ್ನು ಹೂಡಿದರೆ ತುಂಬಾ ತಡ ಆಗುತ್ತದೆ. ಅಲ್ಲದೆ ಮೇಡು, ಮೂಲಿ, ಮ್ಯಾರಿಯಲ್ಲಿ ಸರಿಯಾಗಿ ಗೆರೆಗಳನ್ನೂ ಎಳೆಯಲಾಗುವುದಿಲ್ಲ. ಕೃಷಿ ಬಗೆಗಿನ ಈ ಮಾಹಿತಿ ಗೊತ್ತಿರದ ಕಾರಣ ಚಿತ್ರಕಾರರು ಹಾಗೆ ಬರೆದಿರಬಹುದು. ಆದರೆ, ಹಾಗೆ ಬರೆಯುವಲ್ಲಿ ಇದು ರೈತರ ಶೋಷಣೆ ಅಥವಾ ಇದು ಎತ್ತುಗಳಿಲ್ಲದ ರೈತರ ಬವಣೆ ಎಂಬ ಧ್ವನಿ ಅಡಗಿದೆ ಎನಿಸುತ್ತದೆ. ಹಾಗೆ ಅರ್ಥೈಸುವುದು ತಪ್ಪು.
ಡಾ. ಬಸವರಾಜ ಸಾದರ, ಬೆಂಗಳೂರು