ನವದೆಹಲಿ/ಕೋಲ್ಕತ್ತ (ಪಿಟಿಐ): ಹಣ ಲೇವಾದೇವಿ ಪ್ರಕರಣವೊಂದರಲ್ಲಿ ಬಹುಕೋಟಿ ರೂಪಾಯಿಗಳ ಸಾರಧಾ ಚಿಟ್ಫಂಡ್ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್ ಅವರ ಪತ್ನಿ ಮತ್ತು ಪುತ್ರನನ್ನು ಜಾರಿ ನಿರ್ದೇಶನಾಲಯ ಬುಧವಾರ ತಡರಾತ್ರಿ ಬಂಧಿಸಿದೆ.
ಪಶ್ಚಿಮಬಂಗಾಳ, ಒಡಿಶಾ ಹಾಗೂ ಅಸ್ಸಾಂ ರಾಜ್ಯಗಳಾದ್ಯಂತ ಸಾವಿರಾರು ಹೂಡಿಕೆದಾರರನ್ನು ವಂಚಿಸಿದ ಈ ಭಾರಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಈವರೆಗೆ ತಲೆಮರೆಸಿಕೊಂಡಿದ್ದ ಸುದೀಪ್ತ ಪತ್ನಿ ಪಿಯಾಲಿ ಸೇನ್ ಮತ್ತು ಪುತ್ರ ಶುಭೋಜಿತ್ ಅವರನ್ನು ಎರಡು ತಾಸು ಪ್ರಶ್ನಿಸಿದ ನಂತರ ಬಂಧಿಸಿದ್ದಾರೆ.