ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ಗುಮ್ಮ: ‘ಅನುದಾನಿತರ’ ಸಂಕಷ್ಟ

Last Updated 8 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ನಮ್ಮ ಹೊಸ ಸರ್ಕಾರದ ಆಘಾತಕಾರಿ ಕೊಡುಗೆ ಎಂದರೆ ‘ಅನುದಾನಿತ ಪದವಿ ಕಾಲೇ­ಜಿನ   ೪೦೦ಕ್ಕೂ ಹೆಚ್ಚು ಉಪನ್ಯಾಸಕರನ್ನು ಕಾರ್ಯ­ಭಾರ ರಹಿತ ಹೆಚ್ಚುವರಿ ಉಪನ್ಯಾಸಕ­ರೆಂದು ಪರಿಗಣಿಸಿ ನಿಯೋಜನೆ, ಹಂಚಿಕೆ ಹೆಸರಿ­ನಲ್ಲಿ ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ವರ್ಗಾ­ವಣೆ ಮಾಡಿರುವುದು’. ಬೆಂಗಳೂರಿನಿಂದ ಉಡುಪಿ­ಯ ಬಾರಕೂರಿಗೆ, ಚನ್ನಗಿರಿಗೆ, ಬೆಳ­ಗಾವಿ­ಯ ಗೋಕಾಕ್‌ಗೆ ಹೀಗೆ ನಿಯೋಜನೆಗಳು ನಡೆದಿವೆ. ಈ ನಿಯೋಜನೆ ಎನ್ನುವ ಪ್ರಹಸನ ಅಗತ್ಯವಿತ್ತೇ, ಕಾಲೇಜು ಶಿಕ್ಷಣ ಇಲಾಖೆಯಿಂದ ಇದು ನ್ಯಾಯಬದ್ಧವಾಗಿ ನಡೆದಿದೆಯೇ? ಒಂದು ವೈಚಾರಿಕ ಅವಲೋಕನ ಇಲ್ಲಿ ಅಗತ್ಯ.

ಇತ್ತೀಚಿನ ವರ್ಷಗಳಲ್ಲಿ ಅನುದಾನಿತ ಕಾಲೇ­ಜುಗಳು ಸರ್ಕಾರದಿಂದ ಪೆಟ್ಟು ತಿನ್ನುತ್ತಲೇ ಇವೆ. ಅನು­ದಾನಿತ ಖಾಸಗಿ ಕಾಲೇಜುಗಳಲ್ಲಿ ಕಾರ್ಯ­ಭಾರದ ಕೊರತೆ ಬಗ್ಗೆ ವಿಮರ್ಶೆ ಮಾಡ­ಬೇಕಿದೆ.  ರಾಜ್ಯದಲ್ಲಿ ಸುಮಾರು ೩೦೦ ಅನು­­ದಾನಿತ ಕಾಲೇಜು­ಗಳಿವೆ. ಈ ಕಾಲೇಜು­ಗಳನ್ನು ಪ್ರಾರಂಭಿ­ಸಿದವ­ರು ಯಾರು? ಸಮಾಜಕ್ಕೆ ಅವರ ಕೊಡುಗೆ ಏನು?

ಈ ಹಿನ್ನೆಲೆ ಬಗ್ಗೆ  ಸ್ವಲ್ಪ ದೃಷ್ಟಿ ಹಾಯಿ­ಸೋದು ಒಳ್ಳೆಯದು. ಅತ್ಯುತ್ತಮ ಗುಣಮಟ್ಟದ ಕಾಲೇಜುಗಳಲ್ಲಿ ಅನುದಾನಿತ ಕಾಲೇಜುಗಳ ಸಂಖ್ಯೆ ಗಣನೀಯ ಎನ್ನುವುದು ಅತಿ­ಶಯೋಕ್ತಿ ಅಲ್ಲ. ಸರ್ಕಾರ ಮಾಡಬೇಕಾದ ಕೆಲಸ­ವನ್ನು ಸಮಾಜ ಮಾಡಿರುವ ಒಂದು ದೃಷ್ಟಾಂತ ಇದು. ಈ ಎಲ್ಲಾ ಕಾಲೇಜುಗಳು ಸಾಮಾನ್ಯ ಶಿಕ್ಷಣ ಕ್ಷೇತ್ರ­ದಲ್ಲಿ ಸೇವೆ ಮಾಡಿವೆ ಎನ್ನುವುದು ಗಮ­ನಾರ್ಹ. ಇಂದಿ­ಗೂ ಮೂಲ ವಿಜ್ಞಾನ, ಮಾನವಿಕ ವಿಷಯಗಳು ದೇಶದ ಬೆಳವಣಿಗೆಗೆ ಪೂರಕ ಎಂಬ ತತ್ವದಿಂದ ವಿಮುಖರಾಗದೇ ಸೇವೆ ಮುಂದುವರಿಸಿವೆ. ಕೆಲವು ಸಂಸ್ಥೆಗಳು ವೃತ್ತಿ ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ಪ್ರಾರಂಭಿಸಿ­ರಬ­ಹುದು. ಆದರೆ ಹೆಚ್ಚಿನ ಸಂಸ್ಥೆಗಳು ಇಂದಿಗೂ ಸಮಾ­ಜ­ಸೇವೆಯ ಪರಂಪರೆ ಮುಂದುವರೆಸಿ­ಕೊಂ­ಡು ಬಂದಿವೆ ಎನ್ನುವುದನ್ನು ಮರೆಯ­ಬಾರದು.

ಅನುದಾನ ವ್ಯವಸ್ಥೆ ಪ್ರಾರಂಭವಾದಾಗ ಶೇಕಡ ೧೦೦ ರಷ್ಟು ಅನುದಾನ ಪಡೆಯುತ್ತಿದ್ದ ಕಾಲೇಜುಗಳು ವಿದ್ಯಾರ್ಥಿ ಸಂಖ್ಯೆ ಬೆಳೆದಂತೆಲ್ಲಾ ಕೊರತೆ ಎದುರಿಸುತ್ತಾ ಬಂದಿರುವುದು ವಿಪರ್ಯಾಸ. ಸಮಾಜದ ಅಗತ್ಯಗಳಿಗೆ ಹೊಸ ವಿಷಯಗಳನ್ನು, ಹೊಸ ಕೋರ್ಸ್ ಗಳನ್ನು ಪ್ರಾರಂಭಿಸುವುದು ಅನಿವಾರ್ಯವಾಯಿತು.

ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಬಯೊ ಟೆಕ್ನಾಲಜಿ, ಬಯೊಕೆಮಿಸ್ಟ್ರಿ, ಮೈಕ್ರೋಬಯಾಲಜಿ, ಪತ್ರಿಕೋದ್ಯಮ, ಮನಶಾಸ್ತ್ರ, ಅನಿಮೇಶನ್ ಹೀಗೆ ಪ್ರಾರಂಭಿಸಲಾಗಿರುವ ಅತ್ಯಂತ ಅವಶ್ಯಕ ವಿಷಯಗಳಿಗೆ, ಕಾಂಬಿನೇಷನ್ ಗಳಿಗೆ ಯಾವುದೇ ಅನುದಾನ ನೀಡಲಾಗಿಲ್ಲ. ವಿದ್ಯಾರ್ಥಿಗಳ ಸಂಖ್ಯೆ, ಒತ್ತಡ ಹೆಚ್ಚಿದಂತೆಲ್ಲಾ ನೂತನ ವಿಭಾಗಗಳನ್ನು ತೆರೆಯಬೇಕಾಯಿತು. ಪಾರಂಪರಿಕ ವಿಷಯಗಳ ಜೊತೆ ಉದ್ಯೋಗಾಧಾರಿತ ವಿಷಯಗಳನ್ನು ಸೇರಿಸಿ ಮಾಡಿರುವ ಕಾಂಬಿನೇಶನ್‌ಗಳು, ಅಲ್ಲದೇ ಸುಪ್ರೀಂ ಕೋರ್ಟ್‌ ಆದೇಶದಂತೆ ಭಾರತೀಯ ಸಂವಿಧಾನ, ಪರಿಸರ ವಿಜ್ಞಾನ ಹೀಗೆ ಹಲವು ವಿಷಯಗಳನ್ನು ಕಡ್ಡಾಯವಾಗಿ ಬೋಧಿಸ­ಬೇಕಾಗಿದೆ.

ಆದರೆ ಸರ್ಕಾರದ ದೃಷ್ಟಿಯಲ್ಲಿ ಇವೆಲ್ಲಾ ಅನುದಾನ ರಹಿತ. ಒಂದು ಉದಾಹರಣೆ ಎಂದರೆ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಗಣಿತ ಅನುದಾನಿತ ವಿಷಯವಾಗಿದ್ದರೆ, ಭೌತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ಹಾಗೂ ಗಣಿತ ವಿಷಯಗಳ ಸಮೂಹ ಸಂಪೂರ್ಣ ಅನುದಾನರಹಿತ ಎಂದು ಪರಿಗಣಿಸಲಾಗಿದೆ. ಇಲ್ಲಿಂದಲೇ ಕಾರ್ಯಭಾರದ ಕೊರತೆ ಆತಂಕ ಶುರುವಾಗಿದ್ದು.

೨೦೦೧ರಲ್ಲಿ ಪದವಿ ಪೂರ್ವ ವಿಭಾಗವನ್ನು ೧೬೮ ಪದವಿ ಕಾಲೇಜುಗಳಿಂದ ಬೇರ್ಪಡಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸುಮಾರು ೨೦೦೦ ಹೆಚ್ಚುವರಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಪದವಿ ಪೂರ್ವ ವಿಭಾಗಕ್ಕೆ ನಿಯೋಜಿಸಿ ಹುದ್ದೆ ತೆರವಾದಂತೆಲ್ಲಾ ಪದವಿ ವಿಭಾಗಕ್ಕೆ ಆಯಾ ಕಾಲೇಜುಗಳಲ್ಲಿಯೇ ಮರುನಿಯೋಜಿಸಲು ಆದೇಶಿಸಲಾಗಿತ್ತು. ಈ ಪ್ರಕ್ರಿಯೆ ಪ್ರಾರಂಭವಾದರೂ ಆಡಳಿತಾತ್ಮಕವಾಗಿ ಅನೇಕ ಸಮಸ್ಯೆಗಳು ತಲೆದೋರಿದ್ದರಿಂದ ತ್ವರಿತವಾಗಿ ಮರು ನಿಯೋಜಿಸುವ ದೃಷ್ಟಿಯಿಂದ ಕಾರ್ಯಭಾರದ ನಿಯಮಗಳನ್ನು ಸಡಿಲಿಸಿ ಆಯಾ ಕಾಲೇಜುಗಳಿಗೆ, ಸಾಧ್ಯವಾಗದಿದ್ದರೆ ಇತರೆ ಅನುದಾನಿತ ಅಥವಾ ಸರ್ಕಾರಿ ಕಾಲೇಜುಗಳಿಗೆ ನಿಯೋಜಿಸಲಾಗಿದೆ. ೨೦೦೩–-೦೪ ರಲ್ಲಿ ಪ್ರಾರಂಭವಾಗಿ- ೨೦೦೯–-೧೦ ರಲ್ಲಿ ಹೆಚ್ಚೂ ಕಡಿಮೆ ಈ ಪ್ರಕ್ರಿಯೆ ಮುಗಿದಿದೆ. ಈಗ ಮತ್ತೆ ಅದೇ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿದರೆ ಒಪ್ಪಲು ಸಾಧ್ಯವೇ?

ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದಾಗ ವ್ಯಾಪಕವಾಗಿ ಸ್ವಾಗತಿಸಲಾಯಿತು. ಸುಮಾರು ೧೫೦ ರಷ್ಟಿದ್ದ ಕಾಲೇಜುಗಳ ಸಂಖ್ಯೆ ಈಗ ೪೦೦ ರ ಗಡಿಯನ್ನು ದಾಟುತ್ತಿದೆ. ಕಾಲೇಜುಗಳನ್ನು ಪ್ರಾರಂಭಿಸಿದರೆ ಸಾಕಾಗುವುದಿಲ್ಲ. ಪೋಷಿಸಬೇಕು. ಕನಿಷ್ಠ ಸೌಲಭ್ಯ ನೀಡುತ್ತೇವೆ ಎಂದು ಹೇಳುವುದು ಸಮರ್ಥನೆಯಲ್ಲ. ಅಗತ್ಯ ಸೌಲಭ್ಯ ನೀಡ ಬೇಕು. ಇಲ್ಲದಿದ್ದಲ್ಲಿ ಒಂದು ತಲೆಮಾರಿನ  ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ.

ಅನುದಾನ ಕಡಿಮೆಯಾದಂತೆಲ್ಲಾ ಖಾಸಗಿ ಕಾಲೇಜುಗಳು ದುಬಾರಿಯಾಗಿ ಕಂಡರೆ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಖ್ಯೆ ಹೆಚ್ಚುತ್ತಾ ಬಂದಿರುವುದು ಸ್ವಾಭಾವಿಕ. ಪರಿಣಾಮ ಗ್ರಾಮೀಣ ಭಾಗದ ಅನೇಕ ಖಾಸಗಿ ಕಾಲೇಜುಗಳು ಅವಸಾನದತ್ತ ಸಾಗಿವೆ. ಅನೇಕ ಮೂಲ ವಿಜ್ಞಾನ, ಮಾನವಿಕ ವಿಭಾಗಗಳನ್ನು ಮುಚ್ಚುತ್ತಿರುವುದು ದುರಂತ. ಎಷ್ಟೆಲ್ಲಾ ಸೌಲಭ್ಯಗಳನ್ನು ಸೃಷ್ಟಿ ಮಾಡಿ ಮುಚ್ಚುವ ಪರಿಸ್ಥಿತಿ ಬಂದರೆ ನಷ್ಟ ಯಾರಿಗೆ? 

ವೃತ್ತಿಪರ ಪದವಿಗಳಾದ ಎಂಜಿನಿಯರಿಂಗ್ ಮುಂತಾದ ಕೋರ್ಸ್‌ಗಳ ಕಾಲೇಜುಗಳನ್ನು ತೆರೆಯಲು ವಿಚಾರ ಮಾಡದೇ ಅನುಮತಿ ನೀಡಲಾಯಿತು. ಶೇ ೩೫ ಅಂಕ ಗಳಿಸಿದವರಿಗೂ ಎಂಜಿನಿಯರಿಂಗ್ ಪದವಿ ಆಮಿಷ ನೀಡಲಾಯಿತು. ಇಂದಿನ ಪರಿಸ್ಥಿತಿ ಏನು? ಶೇ ೬೦ ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಪದವೀಧರರು
₨ ೬೦೦೦ ದಿಂದ ೧೬,೦೦೦ ವೇತನ ಪಡೆಯವ ಉದ್ಯೋಗದಲ್ಲಿರುವುದು ಒಂದು ಸಾಧನೆಯೇ? ಕಾಲೇಜುಗಳಲ್ಲಿ ಮೂಲ ವಿಜ್ಞಾನದ ವಿಷಯಗಳ ಕಾರ್ಯಭಾರದ ಕೊರತೆಗೆ ಇದು ಮತ್ತೊಂದು ಕಾರಣ.

ಮತ್ತೊಂದೆಡೆ ಉಪನ್ಯಾಸಕರ ನೇಮಕಾತಿ ಸ್ಥಗಿತ ಮಾಡಲಾಯಿತು. ನಿವೃತ್ತಿ, ರಾಜೀನಾಮೆ, ಮರಣ ಇಂತಹ ಕಾರಣಗಳಿಂದ ಉದ್ಭವವಾದ ಹುದ್ದೆಗಳನ್ನೂ ಆರ್ಥಿಕ ಮಿತವ್ಯಯ ಕಾರಣ ನೀಡಿ ತುಂಬುತ್ತಿಲ್ಲ. ಆಡಳಿತಾತ್ಮಕ ಸಿಬ್ಬಂದಿ ನೇಮಕಾತಿ ಸಂಪೂರ್ಣ ನಿಲ್ಲಿಸಲಾಗಿದೆ.

ಸರ್ಕಾರಿ ಕಾಲೇಜುಗಳಲ್ಲಿ ಮತ್ತೊಂದು ರೀತಿಯ ಅವ್ಯವಸ್ಥೆಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಲಾಗುತ್ತಿದೆ. ಇದು ಅತಿಥಿ ಉಪನ್ಯಾಸಕರ ನೇಮಕಾತಿ ಎನ್ನುವ ಇನ್ನೊಂದು ಪ್ರಹಸನ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೧೨,೦೦೦ ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದೇವೆ ಎನ್ನುವುದು ಸಾಧನೆಯೇ? ಅತಿಥಿ ಉಪನ್ಯಾಸಕರ ನೇಮಕಾತಿ, ಸೇವಾ ಸೌಲಭ್ಯಗಳ ಬಗ್ಗೆ ಪ್ರತ್ಯೇಕ ಚರ್ಚೆ ಅಗತ್ಯ. ವಾರಕ್ಕೆ ಎಂಟು ಗಂಟೆ ತರಗತಿಗಳಲ್ಲಿ ಪಾಠ ಮಾಡಿದರೆ ಇಂದಿನ ಶೈಕ್ಷಣಿಕ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯವೇ?

ವಿದ್ಯಾರ್ಥಿಗಳು ತರಗತಿಗಳಿಗಿಂತ ತರಗತಿಯ ಹೊರಗಡೆ ಹೆಚ್ಚು ಕಲಿಯುತ್ತಾರೆ ಎನ್ನುವ ಮಾತಿದೆ. ಒಬ್ಬ ಶಿಕ್ಷಕ ಪ್ರಶಿಕ್ಷಕನಾಗಿಯೂ ಕರ್ತವ್ಯ ನಿರ್ವಹಿಸಬೇಕು. ವಾರದಲ್ಲಿ ೪೦ ಗಂಟೆಗಳ ಕಾಲ ಕಾಲೇಜಿನಲ್ಲಿರಬೇಕು ಎನ್ನುವ ಸರ್ಕಾರ, ಇನ್ನೊಂದೆಡೆ ಎಂಟು ಗಂಟೆ ಪಾಠ ಮಾಡಿದರೆ ಸಾಕು ಎನ್ನುವ ಸಂದೇಶವನ್ನೂ ರವಾನಿಸುತ್ತಿದೆ. ಇದು ಮಾತು, ಕೃತಿಗಳಲ್ಲಿರುವ ವ್ಯತ್ಯಾಸ.

ಈ ಗೊಂದಲಗಳು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ನೇಮಕಾತಿ, ವರ್ಗಾವಣೆ, ನಿಯೋಜನೆ, ಹಂಚಿಕೆ. ಹೆಸರುಗಳು ಬೇರೆ, ಬೇರೆ. ಪರಿಣಾಮ ಒಂದೇ. ವಿದ್ಯಾರ್ಥಿಗಳು ಸದಾ ಅತಂತ್ರ ಸ್ಥಿತಿಯಲ್ಲಿ!

ಕಲಿಯುವ ಸಮಯದಲ್ಲಿ ವಿದ್ಯಾರ್ಥಿಗಳು ಆಮಿಷಗಳಿಗೆ ಒಳಗಾಗದಂತಹ ಶೈಕ್ಷಣಿಕ ವಾತಾವರಣ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದು. ಸರ್ಕಾರ ನುಣುಚಿಕೊಳ್ಳಲು ಹೇಗೆ ಸಾಧ್ಯ? ಆರ್ಥಿಕ ಸಮಸ್ಯೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಶ್ರೀಮಂತ ರಾಷ್ಟ್ರಗಳಲ್ಲೂ ಇದೇ ಸಮಸ್ಯೆ. ನಮ್ಮ ಆದ್ಯತೆ ಯಾವುದು ಎನ್ನುವುದು ಮುಖ್ಯ.  ಶಿಕ್ಷಕರು ಹಾಗೂ ಆಡಳಿತ ಮಂಡಳಿಗಳ ಜೊತೆ ಸರ್ಕಾರ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT