ಚಂಡೀಗಡ (ಪಿಟಿಐ): ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್ಎಫ್ ಹಗರಣಕ್ಕೆ ಸಂಬಂಧಿಸಿದ ಕಡತದ ಮೊದಲ ಎರಡು ಪುಟಗಳು ನಾಪತ್ತೆಯಾಗಿದ್ದು, ಈ ಬಗ್ಗೆ ಎಫ್ಐಆರ್ ದಾಖಲಿಸಬೇಕು ಎಂದು ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಖೇಮ್ಕಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ಈ ವಿಚಾರ ಗೊತ್ತಾಗಿದೆ.
ಕಡತದ ಮೊದಲ ಎರಡು ಪುಟಗಳು ನಪತ್ತೆಯಾಗಿರುವುದು ನಿಜ ಎಂದು ಒಪ್ಪಿಕೊಂಡಿರುವ ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ. ಗುಪ್ತಾ ಅವರು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ನಾಪತ್ತೆಯಾಗಿರುವ ಪುಟಗಳನ್ನು ಪತ್ತೆ ಹಚ್ಚಿ ಕಡತಕ್ಕೆ ಸೆರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಖೇಮ್ಕಾ ಅವರು ಡಿಎಲ್ಎಫ್ ಮತ್ತು ವಾದ್ರಾ ಕಂಪೆನಿಯ ಭೂಪರಿವರ್ತನೆ ಆದೇಶವನ್ನು ರದ್ದುಪಡಿಸಿದ್ದರು. ನಂತರ ಆಗಿನ ಮುಖ್ಯಮಂತ್ರಿ ಹೂಡಾ ಅವರು ರಚಿಸಿದ್ದ ಮೂವರು ಸದಸ್ಯರ ಸಮಿತಿಯು ವಾದ್ರಾ ಮತ್ತು ಡಿಎಲ್ಎಫ್ ಕಂಪೆನಿಯದು ಏನೂ ತಪ್ಪಿಲ್ಲ ಎಂದು ವರದಿ ನೀಡಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆ ಕಡತದಿಂದ ನಾಪತ್ತೆಯಾಗಿದೆ. ಇದೊಂದು ಗಂಭೀರ ಲೋಪವಾಗಿದ್ದು, ಎಫ್ಐಆರ್ ದಾಖಲಿಸಬೇಕು ಎಂದು ಖೇಮ್ಕಾ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಒತ್ತಾಯಸಿದ್ದಾರೆ.
‘ಗಂಭೀರ ವಿಚಾರ’
ನವದೆಹಲಿ (ಪಿಟಿಐ): ವಾದ್ರಾ ಭೂ ಹಗರಣದ ಕಡತದಿಂದ ಎರಡು ಪುಟಗಳು ನಾಪತ್ತೆಯಾಗಿರುವುದು ಬಹಳ ಗಂಭೀರ ವಿಚಾರ ಎಂದು ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್ ಹೇಳಿದ್ದಾರೆ.