ಸ್ಟೀಫನ್ ಸ್ಟ್ರಾಮ್ ಅವರು ‘ವಾರಾಣಸಿ ಸ್ವಚ್ಛತೆ ಮೋದಿ ಸಾಮರ್ಥ್ಯಕ್ಕೆ ಸವಾಲು’ (ಪ್ರಜಾವಾಣಿಯ ಸಂಗತ, ಜುಲೈ ೨೯) ಲೇಖನದಲ್ಲಿ ಅಲ್ಲಿನ ಐತಿಹಾಸಿಕ ಮಹತ್ವವನ್ನು ತಿಳಿಸುತ್ತ, ‘ಜ್ಞಾನೋದಯದ ಬಳಿಕ ಗೌತಮ ಬುದ್ಧ ತನ್ನ ಮೊದಲ ಬೋಧನೆ ನೀಡಿದ್ದು ಇಲ್ಲಿಯೇ’ ಎಂದಿರುವರು.
ಇನ್ನೂ ಮಹತ್ವದ ಅಂಶವೆಂದರೆ ಜೈನಧರ್ಮದ ಬಹುಜನಪ್ರಿಯ ೨೩ನೇ ತೀರ್ಥಂಕರನಾದ ಭಗವಾನ್ ಪಾರ್ಶ್ವನಾಥನು ಗೌತಮ ಬುದ್ಧನ ಹಿರಿಯ ಸಮಕಾಲೀನನಾಗಿದ್ದ ಭಗವಾನ್ ಮಹಾವೀರನಿಗಿಂತ ಅಂದರೆ ಸುಮಾರು ೨೫೦ ವರ್ಷಗಳ ಮೊದಲು, ಕ್ರಿ.ಪೂ. ೮ನೇ ಶತಮಾನದಲ್ಲಿ ವಾರಾಣಸಿಯಲ್ಲಿ ಜನಿಸಿದನು. ಜೈನ ಸಂಪ್ರದಾಯದ ಪ್ರಕಾರ ತೀರ್ಥಂಕರ ಪಾರ್ಶ್ವನಾಥನ ಪಂಚಕಲ್ಯಾಣಗಳಲ್ಲಿ ಒಂದಾದ ಜನ್ಮ ಕಲ್ಯಾಣವು ಇಲ್ಲಿಯೇ ನೆರವೇರಿತು. ಆದಕಾರಣ ವಾರಾಣಸಿಯು ಬೌದ್ಧ ಮತ್ತು ಹಿಂದೂಗಳಿಗಲ್ಲದೆ ಜೈನ ಧರ್ಮೀಯರಿಗೂ ಶ್ರದ್ಧಾ ಕೇಂದ್ರವಾಗಿದೆ.
-–ಡಾ.ಎಚ್.ಎ.ಪಾರ್ಶ್ವನಾಥ್
ಬೆಂಗಳೂರು