ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿ ಗ್ರಾಮದ ಜಾನಪದ ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ (65) ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು.
ಅವರಿಗೆ ತಾಯಿ, ಪತ್ನಿ, ಒಬ್ಬರು ಪುತ್ರಿ ಇದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವಿಜಯನಗರ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದ ಇವರು, ‘ಉತ್ತರ ಕರ್ನಾಟಕದ ಬಯಲಾಟಗಳು’ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಉತ್ತರ ಕರ್ನಾಟಕದ ರಂಗಗೀತೆಗಳು, ಉತ್ತರ ಕರ್ನಾಟಕದ ಜಾನಪದ ವಾದ್ಯಗಳು, ಶ್ರೀಕೃಷ್ಣ ಪಾರಿಜಾತ, ಕರ್ನಾಟಕದ ಜನಪದ ರಂಗಭೂಮಿ ಸೇರಿದಂತೆ 45ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದರು.
ಜುಲೈ 1ರಂದು ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ತಿಗಡೊಳ್ಳಿಯಲ್ಲಿ ಮಲಶೆಟ್ಟಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.