ಹಾಸನದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ನೂರಾರು ಎಕರೆ ಜಮೀನನ್ನು ರೈತರಿಂದ ವಶಪಡಿಸಿಕೊಂಡು ಹಲವು ವರ್ಷಗಳೇ ಕಳೆದಿವೆ. ಇತ್ತೀಚೆಗಷ್ಟೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ವಾಸ್ತವವಾಗಿ ಹಾಸನಕ್ಕೆ ವಿಮಾನ ನಿಲ್ದಾಣದ ಅವಶ್ಯಕತೆ ಇದೆಯೇ ಎಂಬುದು ಚಿಂತಿಸಬೇಕಾದ ಸಂಗತಿ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ಪ್ರಯಾಣಿಕರ ಕೊರತೆಯಿಂದಾಗಿ ವಿಮಾನ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿಯಿದೆ. ಅಂತಹುದರಲ್ಲಿ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಅದೂ ಬಳಕೆಯಾಗದೆ ಪಾಳು ಬೀಳುವುದರಲ್ಲಿ ಸಂಶಯವಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಸುಖಾಸುಮ್ಮನೆ ಅದರ ನಿರ್ವಹಣೆಗೆ ಲಕ್ಷಾಂತರ ರೂಪಾಯಿಯನ್ನು ವಿನಿಯೋಗಿಸುವುದು ಯಾವ ಪುರುಷಾರ್ಥಕ್ಕಾಗಿ?
ಏಷ್ಯಾದಲ್ಲಿಯೇ ದೊಡ್ಡದು ಎಂದು ಹೇಳಿಕೊಂಡು ನಿರ್ಮಿಸಿದ ಹಾಸನದ ಬಸ್ ನಿಲ್ದಾಣಕ್ಕೆ ತೆರಳುವ ನರಕಸದೃಶ ಮಾರ್ಗವನ್ನೇ ಸುಧಾರಿಸಲಾಗದವರು ವಿಮಾನ ನಿಲ್ದಾಣವನ್ನು ನಿರ್ಮಿಸಿ ಏನನ್ನು ಸಾಧಿಸುತ್ತಾರೋ ತಿಳಿಯದು. ಇಂತಹ ಅನವಶ್ಯಕ ಯೋಜನೆಗಳನ್ನು ಕೈಬಿಟ್ಟು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹಾಸನ-ಬೆಂಗಳೂರು ರೈಲು ಮಾರ್ಗ ಶೀಘ್ರವಾಗಿ ಪೂರ್ಣಗೊಳ್ಳಲು ಒತ್ತು ನೀಡುವುದು ಒಳಿತು.