ಹಾಸನ: ‘ನಗರದಲ್ಲಿ ಮಾರ್ಚ್ 10ರಂದು ನಡೆಸಲು ಉದ್ದೇಶಿಸಿರುವ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದೆ’ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಧರ್ಮೇಶ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮಿಜಿ ಸೇರಿದಂತೆ ಲಿಂಗಾಯಿತ ಸಮಾಜದ ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ. ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ನಿರ್ದಿಷ್ಟ ಧರ್ಮ, ಸಮುದಾಯ ವಿರುದ್ಧ ಪ್ರಚೋದನಕಾರಿ ಭಾಷಣ ಹಾಗೂ ಕೆಡುಕು ಮಾಡುವಂತಹ ಸಮಾವೇಶಗಳನ್ನು ನಿಷೇಧಿಸಬೇಕು’ ಎಂದರು.
‘ಜಿಲ್ಲಾಡಳಿತವು ಸಮಾವೇಶದಲ್ಲಿ ಮಾತನಾಡುವ ಯಾವುದೇ ವ್ಯಕ್ತಿಯ ಹಿನ್ನೆಲೆ ನೋಡಿ ಅನುಮತಿ ನೀಡುವ ನಿರ್ಧಾರ ಕೈಗೊಳ್ಳಬೇಕು. ಸಂವಿಧಾನ ವಿರೋಧಿ ಕ್ರಿಯೆಗಳು ನಡೆದರೆ ಅದಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆಯಾಗಬೇಕು. ಸಮಾವೇಶದ ಹೆಸರಿನಲ್ಲಿ ಪ್ರಚಾರಕ್ಕಾಗಿ ಬಳಸುವ ಫ್ಲೆಕ್ಸ್, ಬ್ಯಾನರ್ಗಳಲ್ಲಿ ಹಾಗೂ ಅವರು ನಡೆಸುವ ಶೋಭಾ ಯಾತ್ರೆಯಲ್ಲಿ ನಿರ್ದಿಷ್ಟ ಕೋಮಿನ ವಿರುದ್ಧ ಅವಹೇಳನ ಆಕ್ರೋಶಭರಿತ ಮತ್ತು ಪ್ರಚೋದನಕಾರಿ ಘೋಷಣೆಗಳನ್ನು ಸಂಪೂರ್ಣವಾಗಿ ಜಿಲ್ಲಾಡಳಿತ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪಿ.ಐ. ಸತೀಶ್, ಅಜಾದ್, ಟಿಪ್ಪು ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮುಬಶಿರ್ ಅಹಮದ್, ದಲಿದ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಹೆತ್ತೂರು, ಬಿ.ಜಿ.ವಿ.ಎಸ್. ಮಮತಾ ಶಿವು, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಖಲಂದರ್ ಕೋಯ್ಲಾ ಹಾಜರಿದ್ದರು.