ಬೆಳಗಲ್ ವೀರಣ್ಣ
(ಯಕ್ಷಗಾನ ಬಯಲಾಟ ಅಕಾಡೆಮಿ)
ವೃತ್ತಿ ರಂಗಭೂಮಿ ಹಾಗೂ ತೊಗಲುಗೊಂಬೆ ಕಲೆಯಲ್ಲಿ ಕಳೆದ 7 ದಶಕಗಳಿಂದ ತೊಡಗಿಸಿಕೊಂಡಿರುವ ಬೆಳಗಲ್ ವೀರಣ್ಣ, ಶಾಲೆಗೆ ತೆರಳಿ ಅಕ್ಷರ ಕಲಿತವರಲ್ಲ. ಬಳ್ಳಾರಿ ತಾಲ್ಲೂಕಿನ ಬೆಳಗಲ್ ಗ್ರಾಮದ ಇವರು ಊರಿಂದ ಊರಿಗೆ ಅಲೆದಾಡುತ್ತ ಬಯಲಾಟ ಪ್ರದರ್ಶಿ-ಸುತ್ತಿದ್ದ ತಂದೆ ದೊಡ್ಡ ಹನುಮಂತಪ್ಪ ಅವರಿಂದ ಬಯಲಾಟ ಕಲೆ ರೂಢಿಸಿಕೊಂಡರು. ಜರ್ಮನಿ, ಸ್ವಿಜರ್ಲೆಂಡ್ ದೇಶಗಳಲ್ಲೂ ತಮ್ಮ ಕಲೆ ಪ್ರದರ್ಶಿಸಿದ್ದಾರೆ.
ಬಿ.ಎ. ಮುಹಮ್ಮದ್ ಹನೀಫ್
(ಬ್ಯಾರಿ ಅಕಾಡೆಮಿ)
ಹನೀಫ್ ಅವರು ವೃತ್ತಿಯಿಂದ ವಕೀಲರು. ರಾಜಕಾರಣಿಯೂ ಹೌದು. ಸದ್ಯ ಉಳ್ಳಾಲದಲ್ಲಿ ನೆಲೆಸಿದ್ದಾರೆ. ಸಾಮಾಜಿಕ ಚಳವಳಿಯ ಸಂಗಾತಿ. ಅಹಿಂದ ಚಳವಳಿಯಲ್ಲಿ ಗುರುತಿಸಿಕೊಂಡವರು. ಅಖಿಲ ಭಾರತ ಬ್ಯಾರಿ ಪರಿಷತ್ತಿನ ಅಧ್ಯಕ್ಷರಾಗಿ, ಮುಸ್ಲಿಂ ವಿಕಾಸ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬ್ಯಾರಿ ಆಂದೋಲನದ ಹೆಜ್ಜೆಗಳು, ಬ್ಯಾರಿ ಅಧ್ಯಯನ 2008, ನಮ್ಮೂರು, ಜಾತಿ–ಧರ್ಮ ಮತ್ತು ಮೀಸಲಾತಿ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.
ಡಾ.ಎಂ.ಎಸ್. ಮೂರ್ತಿ (ಲಲಿತಕಲಾ ಅಕಾಡೆಮಿ)
ಡಾ.ಎಂ.ಎಸ್. ಮೂರ್ತಿ ಅವರು 18ಕ್ಕೂ ಹೆಚ್ಚು ಬಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದಾರೆ. ಇವರು ಇರಾನಿನ ಚಿತ್ರಕಲಾ ಅಕಾಡೆಮಿಯ ಪ್ರಶಸ್ತಿ, 2010ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅವರು ಬರೆದ ಪ್ರಬಂಧಗಳ ಸಂಕಲನ ‘ದೇಸಿ ನಗು’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಬುದ್ಧನ ಉಪದೇಶಗಳನ್ನು ಆಧರಿಸಿದ ನಾಟಕ ‘ಯಶೋಧೆ ಮಲಗಿಲ್ಲ’ 2007ರಲ್ಲಿ ಬೆಂಗಳೂರು ಆಕಾಶವಾಣಿಯಿಂದ ಅತ್ಯುತ್ತಮ ಪ್ರಾದೇಶಿಕ ನಾಟಕ ಗೌರವಕ್ಕೆ ಪಾತ್ರವಾಗಿದೆ.
ಜಾನಕಿ ಬ್ರಹ್ಮಾವರ
(ತುಳು ಅಕಾಡೆಮಿ)
ತುಳು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಜಾನಕಿ ಬ್ರಹ್ಮಾವರ ಅವರು ಉಡುಪಿ ಜಿಲ್ಲೆಯ ಮೂಡುತೋನ್ಸೆಯ ಮೂಡುಕುದ್ರುವಿನವರು.
ಕುದುರದ ಕೇದಗೆ, ಕಪ್ಪುಗಿಡಿ, ಯುಗಮಗರ್ನಗ, ರುಕ್ಕು ಪ್ರಮುಖ ಕಾದಂಬರಿಗಳು. ಏಕಲವ್ಯ, ರಕ್ತಾಕ್ಷಿಮಾಯದ, ಮುರ್ಗಅಮರ್ ಬೈದೆರ್ ಅನುವಾದಿತ ಕೃತಿಗಳು. ಕರ್ನಾಟಕ ತುಳು ಅಕಾಡೆಮಿ ಪುಸ್ತಕ ಪುರಸ್ಕಾರ, ಮಕ್ಕಳ ಸಾಹಿತ್ಯ ಸಂಗಮ ಪುರಸ್ಕಾರ, ಸಂದೇಶ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಅವರಿಗೆ ಲಭಿಸಿವೆ.
ರೊನಾಲ್ಡ್ ಕಾಸ್ಟಲಿನೊ
(ಕೊಂಕಣಿ ಸಾಹಿತ್ಯ ಅಕಾಡೆಮಿ)
ಇವರು ರೋಯ್ ಕ್ಯಾಸ್ಟಲಿನೊ ಎಂದೇ ಪರಿಚಿತರು. ವೃತ್ತಿಯಲ್ಲಿ ಉದ್ಯಮಿ, ಬಿಲ್ಡರ್. ಶಾಲೆಗಳಲ್ಲಿ ಕೊಂಕಣಿ ಭಾಷಾ ಕಲಿಕೆಗೆ ಒತ್ತಾಯಿಸುವ ಕೊಂಕಣಿ ಪ್ರಚಾರ ಸಂಚಲನದ ಅಧ್ಯಕ್ಷರು. ಕೊಂಕಣಿ ಉದ್ಯಮಿಗಳ ಸಂಘ ’ರಚನಾ’ದ ಮಾಜಿ ಅಧ್ಯಕ್ಷರು. ಸಂದೇಶ ಪ್ರತಿಷ್ಠಾನದ ಟ್ರಸ್ಟಿ. ಕಲಾಂಗಣದ ನಿರ್ದೇಶಕರು. ಕಲಾಂಗಣದ ಕಾರ್ಯಕಾರಿ ಸಮಿತಿ ಸದಸ್ಯರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.