ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕೋಶ: ಪರಿಷ್ಕರಣೆ ಅಗತ್ಯ

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

‘ಕನ್ನಡ ಜಾನಪದ ವಿಶ್ವಕೋಶ: ಅಗತ್ಯ ಅನಿ­ವಾರ್ಯತೆ’ ಬಗ್ಗೆ ಡಾ. ಜಿ.ಆರ್. ತಿಪ್ಪೇಸ್ವಾಮಿ ಅವರು ಬರೆದ ಬರಹವನ್ನು (ಪ್ರ.ವಾ ಮಾ. 23, ಪುಟ 7) ಓದಿದೆ. ಅವರು ಮುಖ್ಯವಾಗಿ  ಕೆಲವು ಅಂಶಗಳನ್ನು ಗಮನಕ್ಕೆ ತಂದಿದ್ದಾರೆ. (1) ಮೂವತ್ತು ವರ್ಷಗಳ ಹಿಂದೆ ಡಾ. ಚಂದ್ರಶೇಖರ ಕಂಬಾರರ ಸಂಪಾ­ದಕತ್ವ­ದಲ್ಲಿ ತಯಾರಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟ­ವಾಗಿದ್ದ ‘ಕನ್ನಡ ಜಾನಪದ ವಿಶ್ವಕೋಶಗಳ ಸಂಪುಟ 1 ಮತ್ತು 2’ ಅನ್ನು ಜರೂರಾಗಿ ಮರು­ಮುದ್ರಿಸ­ಬೇಕು. (2) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಂಪನಾ ಅಧ್ಯಕ್ಷ­ರಾಗಿದ್ದ ಸಮಯದಲ್ಲಿ ಶುರುವಾದ ‘ಕನ್ನಡ ಜಾನಪದ ವೈದ್ಯ ವಿಶ್ವಕೋಶ’ದ ರಚನೆಯನ್ನು ಈಗಲಾದರೂ ಮುಗಿಸಿ ಪ್ರಕಟಿಸುವುದು.

(3) ಕನ್ನಡ ವಿಶ್ವವಿದ್ಯಾಲ­ಯವು ವಿವಿಧ ಜಾನಪದ ವಿಶ್ವಕೋಶಗಳನ್ನು ಪ್ರಕಟಿಸಿದೆ ಎಂಬ ಮಾತು. (4) ಇವುಗಳನ್ನು ಗಮನ­ದಲ್ಲಿಟ್ಟು­ಕೊಂಡು ಜಾನಪದ ವಿಶ್ವವಿದ್ಯಾಲಯವು ತನ್ನ ‘ಜಾನ­ಪದ ವಿಶ್ವಕೋಶ’ಗಳ ಯೋಜನೆಯನ್ನು ನಿರ್ವಹಿಸ­ತಕ್ಕದ್ದು ಎಂಬರ್ಥದ ಮಾತು.

ಅವರ ಈ ಅಭಿಪ್ರಾಯ­ಗಳಿಗೆ ನನ್ನ ಪ್ರತಿಕ್ರಿಯೆ: (1) ಚಂದ್ರಶೇಖರ ಕಂಬಾರರ ಸಂಪಾದಕತ್ವದಲ್ಲಿ ಮೂವತ್ತು ವರ್ಷಗಳ ಹಿಂದೆ ಪ್ರಕಟವಾದ ‘ಕನ್ನಡ ಜಾನಪದ ವಿಶ್ವಕೋಶ’­ಗಳನ್ನು ಹಾಗೆಯೇ ಮರು ಮುದ್ರಿಸುವುದರಲ್ಲಿ ಅರ್ಥವಿಲ್ಲ. ಅವುಗಳ ಮರುಪರಿಶೀಲನೆ ನಡೆದು ನಂತರ ಅವುಗಳು ಮರು ಮುದ್ರಣವಾಗಬೇಕು. (2) ಹಂಪನಾ ಕಾಲದಲ್ಲಿ ಶುರುವಾದ ‘ಜಾನಪದ ವೈದ್ಯ ವಿಶ್ವಕೋಶ’ದ ಕೆಲಸ ಅರ್ಧಂಬರ್ಧ ಆಗಿದ್ದರೆ ಅದೂ ಸಹ ಮರುಪರಿಶೀಲನೆ­ಯಾಗಿ, ಮತ್ತೆ ಬರೆಯ­ಬೇಕಾದದ್ದು ಇದ್ದರೆ ಬರೆದು ನಂತರ ಪ್ರಕಟವಾಗಬೇಕು. (3) ಕನ್ನಡ ವಿ.ವಿಯಲ್ಲಿ ‘ಜಾನಪದ ಕಲೆಗಳ ವಿಶ್ವಕೋಶ’ವೊಂದನ್ನು ಬಿಟ್ಟರೆ ಜಾನಪದಕ್ಕೆ ಸಂಬಂಧಿಸಿದಂತೆ ಯಾವುದೇ ಕೋಶಗಳು ಪ್ರಕಟವಾಗಿಲ್ಲ. ಧರ್ಮ, ಕರಕುಶಲಕಲೆ, ಭಾಷೆ, ವೈದ್ಯ ಮುಂತಾದ ವಿಷಯಗಳಲ್ಲಿ ವಿಶ್ವಕೋಶಗಳು ಮಾತ್ರ ಪ್ರಕಟವಾಗಿವೆ.

ಆದರೆ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಕುಲಪತಿ (1996) ಆಗಿದ್ದಾಗ ಹಮ್ಮಿಕೊಂಡು ಸಿದ್ಧವಾಗಿದ್ದ ‘ಪುರಾಣ ವಿಶ್ವಕೋಶ’ ಮತ್ತು ‘ಗ್ರಾಮದೇವತೆಗಳ ವಿಶ್ವಕೋಶ’ಗಳು ಇಷ್ಟು ವರ್ಷವಾದರೂ ಪ್ರಕಟವಾಗಲಿಲ್ಲ. ‘ಗ್ರಾಮದೇವತೆಗಳು ವಿಶ್ವಕೋಶ’ ಸಿದ್ಧತೆಗಾಗಿ ಇಪ್ಪತ್ತು ವರ್ಷಗಳ ಹಿಂದೆ ಇಡೀ ರಾಜ್ಯದಾದ್ಯಂತ ಜಾನಪದ ತಜ್ಞರು ಶ್ರಮಿಸಿ ಮಾಹಿತಿಯನ್ನು ಸಂಗ್ರಹಿಸಿ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದರು. ಅದರ ಸಂಪಾದನ ಕಾರ್ಯವನ್ನು ಹಿರೇಮಠ, ಬಿಳಿಮಲೆ, ಬೇವಿನಕಟ್ಟೆ, ಬೋರಲಿಂಗಯ್ಯ ಹೀಗೆ ಹಲವಾರು ವಿದ್ವಾಂಸರು ಮಾಡಿದ್ದರು. ಆದರೆ ಅವರವರ ವೈಯಕ್ತಿಕ ಜಗಳದಿಂದಾಗಿ ಇದುವರೆಗೂ ಈ ಗ್ರಾಮದೇವತೆಗಳ ಕೋಶ ಹೊರಗೆ ಬರಲೇ ಇಲ್ಲ.

ಇದಕ್ಕೆ ವಿಶ್ವವಿದ್ಯಾಲಯ ಖರ್ಚು ಮಾಡಿದ ಹಣ ಲಕ್ಷಾಂತರ ರೂಪಾಯಿಗಳು. ಹಾಗೆಯೇ ಓ.ಎಲ್‌. ನಾಗಭೂಷಣ­ಸ್ವಾಮಿ, ಮೋಹನ ಕುಂಟಾರ, ಗಾಯಕವಾಡ ಇವರ ನೇತೃತ್ವದಲ್ಲಿ ಸಿದ್ಧಗೊಂಡ ‘ಪುರಾಣ ವಿಶ್ವಕೋಶ’ ಕೂಡ  ಹೊರಬರಲೇ ಇಲ್ಲ. ಇದಕ್ಕೂ ವಿಶ್ವವಿದ್ಯಾ­ಲಯ ಖರ್ಚು ಮಾಡಿದ ಹಣ ಲಕ್ಷಾಂತರ ರೂಪಾಯಿಗಳು.

ಹೀಗೆ ಪರಿಷತ್ತು ಮತ್ತು ಕನ್ನಡ ವಿಶ್ವವಿದ್ಯಾಲಯಗಳ ವಿಶ್ವಕೋಶಗಳಿಗೆ ಬಂದ ಗತಿಯೇ ಜಾನಪದ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೋಶಗಳಿಗೂ ಬರುವುದಿಲ್ಲ ಎಂಬುದು ಏನು ಗ್ಯಾರಂಟಿ? ಸರ್ಕಾರದ ಹಣ ಮಾತ್ರ ಹೀಗೆ ದಂಡದ ಸಂಬಳಕ್ಕೆ, ಕಾಲಹರಣಕ್ಕೆ ಎಲ್ಲಾ ಕಡೆ ದುರ್ವ್ಯಯವಾಗುತ್ತಿರುವುದು ವಿಷಾದನೀಯ.

–ಕನ್ನಡ ವಿಶ್ವವಿದ್ಯಾಲಯದ ಗ್ರಾಮದೇವತೆಗಳ ವಿಶ್ವಕೋಶದ ಸಿದ್ಧತೆಯಲ್ಲಿ ಮಾಹಿತಿ ನೀಡಿದ
ಒಬ್ಬ ಮಾಹಿತಿದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT