ರಾಜೀನಾಮೆ ಬೆದರಿಕೆ ನೀಡುವುದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರಿಗೆ ವಾರ್ಷಿಕ ಕಾರ್ಯಕ್ರಮವಾಗಿರುವಂತೆ ಕಾಣುತ್ತಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅವ್ಯವಸ್ಥೆ ಇಡೀ ರಾಜ್ಯದ ಜನತೆಗೆ ಗೊತ್ತು. ಹಣ ನೀಡದೆ ಯಾವ ಸೌಲಭ್ಯವೂ ಸಿಗುವುದಿಲ್ಲ.
ಇಂದು ಸರ್ಕಾರಿ ಸೇವೆಯಲ್ಲಿ ಹಣ ತೆಗೆದುಕೊಳ್ಳದೇ ಸೇವೆ ನೀಡುವ ವೈದ್ಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ.
ಅಗತ್ಯ ಸೇವೆಯಲ್ಲಿರುವ ವೈದ್ಯರು ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸ್ಥಾನದಲ್ಲಿಯೇ ಇರಬೇಕೆಂಬ ನಿಯಮವಿದ್ದರೂ ಸಂಜೆಯಾದ ಮೇಲೆ ಯಾವ ವೈದ್ಯರೂ ಹಳ್ಳಿಗಳಲ್ಲಿರುವುದಿಲ್ಲ. ಎಲ್ಲರೂ ಹತ್ತಿರದ ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ತೆರಳಿ ಖಾಸಗಿಯಾಗಿ ವೃತ್ತಿ ನಡೆಸುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳನ್ನು ಅಸಡ್ಡೆಯಿಂದ ನೋಡುವ ಅನೇಕರು ಅದೇ ರೋಗಿಗಳು ಅವರ ಖಾಸಗಿ ಕ್ಲಿನಿಕ್ಗೆ ಹೋದರೆ ಪ್ರೀತಿಯಿಂದ ಕಾಣುತ್ತಾರೆ.ಇಂತಹವುಗಳನ್ನೆಲ್ಲ ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳು ಪ್ರಶ್ನಿಸುತ್ತಾರೆ. ಅದರಿಂದ ತಪ್ಪಿಸಿಕೊಳ್ಳಲು ತಮ್ಮನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಿಂದ ಹೊರಗಿಡಬೇಕೆಂದು ವೈದ್ಯರು ಚಳವಳಿ ನಡೆಸುತ್ತಾರೆ.
ಇಂತಹ ಅಕ್ರಮಗಳಿಗೆ ಸೊಪ್ಪು ಹಾಕದ ಶಿವಶೈಲಂರಂತಹ ದಿಟ್ಟ ಅಧಿಕಾರಿಗಳು ಇವರಿಗೆ ಅಪಥ್ಯವಾಗುತ್ತಾರೆ. ಹಿಂದೆಯೂ ಮದನ್ಗೋಪಾಲ್ರಂತಹ ದಕ್ಷ ಅಧಿಕಾರಿ ವಿರುದ್ಧ ಇವರು ಹೋರಾಟ ನಡೆಸಿದ್ದರು. ಮುಷ್ಕರ ಮಾಡದಂತೆ ಕೋರ್ಟ್ ಸೂಚನೆ ನೀಡಿದ್ದರೂ ಈ ವೈದ್ಯರು ಅದಕ್ಕೂ ಸೊಪ್ಪು ಹಾಕುತ್ತಿಲ್ಲ. ವೈದ್ಯ ಸಂಘದ ಕೆಲವು ನಾಯಕರ ಪ್ರತಿಷ್ಠೆಯಿಂದ ಮತ್ತು ಅವರ ರಾಜಕೀಯ ಆಸೆಗಳಿಗಾಗಿ ಸರ್ಕಾರ ಅವರ ಮುಂದೆ ಕಾಲೂರುವಂತಾಗಬಾರದು.
– ಟಿ.ಎ. ಅಪ್ಪಾಜಿ, ಭದ್ರಾವತಿ