ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ 541 ಎಕರೆ ಜಮೀನನ್ನು ಅಧಿಸೂಚನೆಯಿಂದ ಕೈಬಿಟ್ಟಿರುವ ಪ್ರಕರಣದ ಆರೋಪ, ಪ್ರತ್ಯಾರೋಪ ಹಾಗೂ ಸಮರ್ಥನೆ ಮತ್ತು ಟೀಕೆಗಳನ್ನು ಪತ್ರಿಕೆಗಳಲ್ಲಿ ಓದಿದಾಗ ‘ಅತ್ತ ಹಾವೂ ಸಾಯಬಾರದು. ಇತ್ತ ಕೋಲೂ ಮುರಿಯಬಾರದು’ ಎಂಬ ಗಾದೆ ಜ್ಞಾಪಕಕ್ಕೆ ಬರುತ್ತದೆ.
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಿಂದೆಲ್ಲಾ ಇಂತಹ ತನಿಖೆಗಳಿಂದ ಏನೂ ಪ್ರಯೋಜನವಾಗದೆ, ಅನೇಕ ವರದಿಗಳು ದೂಳು ತಿಂದಿರುವುದು ಜನರಿಗೆ ಗೊತ್ತಿಲ್ಲದ ವಿಷಯವಲ್ಲ. ತನಿಖೆ ಮುಗಿಯುವಷ್ಟರಲ್ಲಿ ಅಧಿಕಾರದಲ್ಲಿ ಇರುವವರು ಅವಧಿ ಪೂರೈಸಿ ಮನೆ ಸೇರಿರುತ್ತಾರೆ.
ಈ ತನಿಖೆಗಳೆಲ್ಲಾ ವೃಥಾ ಹಣ ಖರ್ಚು ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವ ‘ಬ್ರಹ್ಮಾಸ್ತ್ರ’ಗಳೇ ವಿನಾ ತಪ್ಪಿತಸ್ಥರನ್ನು ದಂಡಿಸುವ ಬೆತ್ತಗಳಲ್ಲ. ಇಂತಹ ತಂತ್ರಗಾರಿಕೆಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ರಾಜ್ಯದಲ್ಲಿ ಮಳೆ, ಬಿತ್ತನೆ, ರಸ್ತೆ, ವಿದ್ಯುತ್, ನೀರು, ಉದ್ಯೋಗ, ಮಹಿಳೆ ಮತ್ತು ಮಕ್ಕಳ ರಕ್ಷಣೆ, ನೆಲ ಜಲ, ಭಾಷೆ ಇಂತಹ ವಿಷಯಗಳ ಕಡೆ ಹೆಚ್ಚು ಗಮನ ಹರಿಸಿದಾಗ ಸಮೃದ್ಧ, ನಿರ್ಮಲ, ಮಾದರಿ ಕರ್ನಾಟಕದ ಕನಸು ನನಸಾದೀತು.