ಬೆಂಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಎಷ್ಟರಮಟ್ಟಿಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡುತ್ತಿವೆ ಎಂಬುದರ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ. ಹಿರಿಯ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಹಾಗೂ ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ವಿಭಾಗೀಯ ಪೀಠವು ಈ ಕುರಿತಂತೆ ಬುಧವಾರ ಮೌಖಿಕ ಸೂಚನೆ ನೀಡಿತು.
ರಾಜ್ಯದಲ್ಲಿರುವ ಒಟ್ಟು ಶಾಲೆಗಳೆಷ್ಟು? ಈ ಶಾಲೆಗಳ ಮಕ್ಕಳ ಸುರಕ್ಷತೆಗೆ ಯಾವ್ಯಾವ ಮಾರ್ಗಸೂಚಿಗಳನ್ನು ರಚಿಸಲಾಗಿದೆ? ೧೭ ವರ್ಷಕ್ಕಿಂತ ಹಳೆಯದಾದ ಶಾಲಾ ವಾಹನಗಳೆಷ್ಟು? ಅವುಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆಯೇ ಎಂಬಿತ್ಯಾದಿ ಕುರಿತು ವಿವರಣೆ ನೀಡಿ ಎಂದು ಪೀಠವು ಹೇಳಿದೆ.
‘ರಾಜ್ಯ ಸರ್ಕಾರವು ಶಾಲಾ ಮಕ್ಕಳ ವಾಹನ ಸುರಕ್ಷತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳ ರಚನೆ ಮಾಡಿಲ್ಲ’ ಎಂದು ಆರೋಪಿಸಿ ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠವು ಈ ವಿವರಣೆ ಬಯಸಿತು.