‘ರಾಜಕೀಯಕರಣ ಬೇಡ: ಆಡಳಿತ ವ್ಯವಸ್ಥೆ ಸುಧಾರಿಸಿ’ ಶೀರ್ಷಿಕೆಯ ಸಂಪಾದಕೀಯ (ಪ್ರ.ವಾ., ಜುಲೈ 13) ಮತ್ತು ಪತ್ರಿಕೆಯ ‘ಚರ್ಚೆ’ ಅಂಕಣದಲ್ಲಿ ಅದೇ ದಿನ ಪ್ರಕಟವಾಗಿರುವ ಇಬ್ಬರು ಓದುಗರ (ಪ್ರಕಾಶ್ ಕಾಕಾಲ್, ಕೆ.ಎಸ್. ಸೋಮೇಶ್ವರ) ಅಭಿಪ್ರಾಯಗಳು ಒಂದಕ್ಕೊಂದು ಪೂರಕವಾಗಿವೆ.
ಈ ಬರಹಗಳ ಸಾರಾಂಶ ಇದು: ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಅಧಿಕಾರಾರೂಢ ರಾಜಕೀಯ ವ್ಯಕ್ತಿಗಳ ಕೊಡುಗೆ ದೊಡ್ಡದು. ರಾಜಕೀಯ ಮುಖ್ಯಸ್ಥರಲ್ಲಿ ನೈತಿಕ ಸ್ಥೈರ್ಯವೆನ್ನುವುದು ಉಡುಗಿಹೋಗಿದೆ. ಅಧಿಕಾರಿ ಗಳು ಪ್ರಾಮಾಣಿಕರಾಗಿದ್ದರಷ್ಟೇ ಸಾಲದು. ಮಂತ್ರಿ ಮಹೋದಯರ ಮತ್ತು ಮೇಲಧಿಕಾರಿಗಳ ಕಾನೂನು ಬಾಹಿರ ಮೌಖಿಕ ಆದೇಶಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ಲಕ್ಷಿಸುವ ದಿಟ್ಟತನ ಮೆರೆಯಬೇಕು.
ಇವರು ಯಾರಿಗೂ ಮುಲಾಜು ತೋರಬೇಕಿಲ್ಲ. ದಕ್ಷ, ಪ್ರಾಮಾಣಿಕ ಅಧಿಕಾರಿ ಗಳು ಕಡತಗಳಲ್ಲಿ ವಾಸ್ತವ ಸಂಗತಿಗಳನ್ನು ದಾಖಲಿಸಲು ಹಿಂಜರಿಯದಿದ್ದರೆ ಅವಾಂತರ ನಡೆಯುವುದು ಸಾಧ್ಯವಿಲ್ಲ. ಆಡಳಿತಾರೂಢ ರಾಜಕಾರಣಿಗಳಿಗೆ ಶಾಸ್ತಿಯಾಗಬೇಕು.
-ಸಾಮಗ ದತ್ತಾತ್ರಿ, ಬೆಂಗಳೂರು