ಮಂದಗತಿಯಲ್ಲಿ ಸಾಗುತ್ತಿದ್ದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಕೆಲವಾದರೂ ಪ್ರಕರಣಗಳಲ್ಲಿ ತ್ವರಿತವಾಗಿ ಇತ್ಯರ್ಥವಾಗುತ್ತಿರುವುದು ಸಮಾಧಾನ ತರುವ ವಿಷಯ. ಮುಂಬೈನ ಶಕ್ತಿಮಿಲ್ ಆವರಣದಲ್ಲಿ 18 ವರ್ಷ ವಯಸ್ಸಿನ ಟೆಲಿಫೋನ್ ಆಪರೇಟರ್ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು 8 ತಿಂಗಳ ಒಳಗೆ ಮುಗಿಸಿ ನಾಲ್ಕು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಆಶಾದಾಯಕ ಬೆಳವಣಿಗೆ.
ಅವರಲ್ಲಿ ಮೂವರು, ಪತ್ರಕರ್ತೆಯೊಬ್ಬರ ಮೇಲೆ ಅದೇ ಜಾಗದಲ್ಲಿ ನಡೆದ ಇನ್ನೊಂದು ಅತ್ಯಾಚಾರ ಪ್ರಕರಣದಲ್ಲೂ ಭಾಗಿಯಾಗಿದ್ದರು. 18 ವರ್ಷ ತುಂಬದ ಇನ್ನಿಬ್ಬರು ಆರೋಪಿಗಳ ವಿಚಾರಣೆ ಪ್ರತ್ಯೇಕವಾಗಿ ಬಾಲ ನ್ಯಾಯ ಕಾಯ್ದೆಯ ಅನ್ವಯ ನಡೆಯುತ್ತಿದೆ. ‘ಅತ್ಯಾಚಾರ ನಡೆಸಿದ ಅಪರಾಧಿಗಳಿಗೆ ಕ್ಷಮೆ ನೀಡುವುದು ಎಂದರೆ ನ್ಯಾಯ ದಾನವನ್ನು ಅಪಹಾಸ್ಯ ಮಾಡಿದಂತೆ. ಪೂರ್ವಯೋಜಿತ ಸಂಚಿನಿಂದ ಈ ಅತ್ಯಾಚಾರ ಎಸಗಲಾಗಿದೆ’ ಎಂದು ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿದ ಸೆಷನ್ಸ್ ನ್ಯಾಯಾಧೀಶರು ಹೇಳಿದ್ದಾರೆ.
ಅತ್ಯಾಚಾರದಂತಹ ಪ್ರಕರಣಗಳಲ್ಲಿ ವಿಚಾರಣೆ ಮಂದಗತಿ ಯಲ್ಲಿ ಸಾಗಿದರೆ ಅದರಿಂದ ಕೃತ್ಯ ಎಸಗಿದ ವ್ಯಕ್ತಿಗೆ ಲಾಭವಾಗಬಹುದೇ ಹೊರತು ಸಂತ್ರಸ್ತರಿಗೆ ಅಲ್ಲ. ನ್ಯಾಯದಾನ ವಿಳಂಬ ಎಂದರೆ ನ್ಯಾಯವನ್ನು ನಿರಾಕರಿಸಿದಂತೆ. ಸಾಕ್ಷಿಗಳಿಗೆ ಬೆದರಿಕೆ, ಸಾಕ್ಷ್ಯ ನಾಶ, ಪ್ರಕರಣ ದುರ್ಬಲ ಗೊಳಿಸಲು ಆರೋಪಿಗಳ ಹತ್ತು ಹಲವು ತಂತ್ರಗಳು– ಇವು ನ್ಯಾಯದಾನ ವ್ಯವಸ್ಥೆಗೆ ದೊಡ್ಡ ಅಡಚಣೆಗಳಾಗುತ್ತವೆ. ಆದರೆ 2012ರ ಡಿಸೆಂಬರ್
ತಿಂಗಳಿನಲ್ಲಿ ದೆಹಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಸಾವಿನ ಪ್ರಕರಣಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ಆಕ್ರೋಶ, ಚಳವಳಿ ಹಾಗೂ ಮಾಧ್ಯಮಗಳು ಬೀರಿದ ಪ್ರಭಾವದಿಂದಾಗಿ ಈಗ ಅತ್ಯಾಚಾರ ಕಾನೂನುಗಳು ಬಿಗಿಗೊಂಡಿರುವುದು ಸಕಾರಾತ್ಮಕ ಬೆಳವಣಿಗೆ. ನ್ಯಾಯದಾನ ಪ್ರಕ್ರಿಯೆಯಲ್ಲಿ ಇದು ಪ್ರತಿಫಲನಗೊಳ್ಳುತ್ತಿದೆ.
ಪೊಲೀಸರಿಂದ ಶೀಘ್ರಗತಿಯಲ್ಲಿ ತನಿಖೆ, ಕಾನೂನಿನ ಕೈಯಿಂದ ಆರೋಪಿ ತಪ್ಪಿಸಿಕೊಳ್ಳದಂತೆ ಸಾಕ್ಷ್ಯಾಧಾರ ಸಂಗ್ರಹ, ಸಾಕ್ಷಿಗಳಿಗೆ ರಕ್ಷಣೆ ಮತ್ತು ಧೈರ್ಯ ತುಂಬುವ ಕೆಲಸ ನಡೆದರೆ ಅತ್ಯಾಚಾರ ಪ್ರಕರಣವನ್ನು ಅರ್ಧ ಗೆದ್ದಂತೆ. ಶೀಘ್ರಗತಿಯಲ್ಲಿ ತನಿಖೆ ಮತ್ತು ವಿಚಾರಣೆ ಎಲ್ಲಾ ಅತ್ಯಾಚಾರ ಪ್ರಕರಣಗಳಿಗೂ ಅನ್ವಯವಾಗಬೇಕು. ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಗಳಾಗುವ ಅಥವಾ ಪ್ರಮುಖ ನಗರಗಳಲ್ಲಿ ನಡೆಯುವ ಪ್ರಕರಣಗಳು ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ ಕುರಿತೂ ವಿಚಾರಣೆ ತೀವ್ರಗತಿಯಲ್ಲಿ ಆಗಬೇಕು. ಶೀಘ್ರಗತಿಯಲ್ಲಿ ತಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಸಂತ್ರಸ್ತರಿಗೆ ಸಿಗುವುದು ಅಗತ್ಯ.
ಮುಂಬೈನಲ್ಲಿ ನಡೆದ ಎರಡೂ ಪ್ರಕರಣಗಳು ನಗರಮಧ್ಯದಲ್ಲಿ ನಡೆದಂತಹವು. ಇದರಿಂದಾಗಿ ಮುಂಬೈ ನಗರ ಮಹಿಳೆಯರಿಗೆ ಸುರಕ್ಷಿತ ಎನ್ನುವ ಭಾವನೆ ಕಳಚಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯೋಗದ ಸ್ಥಳಗಳಲ್ಲಿ ತಾವು ಸುರಕ್ಷಿತ ಎನ್ನುವ ಭಾವನೆ ಮಹಿಳೆಯರಿಗೆ ಮೊದಲು ಮೂಡಬೇಕು. ಇದಕ್ಕೆ ತಕ್ಕ ವಾತಾವರಣ ನಿರ್ಮಾಣ ಆಗಬೇಕು.
ಅಪರಾಧ ನಡೆಸಿಯೂ ತಾವು ಪಾರಾಗಲು ಸಾಧ್ಯ ಎನ್ನುವುದು ಅಪರಾಧಿ ಮನೋಭಾವ ಹೊಂದಿರುವವರಲ್ಲಿ ಹೆಚ್ಚುತ್ತಿರು-ವುದೇ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣ. ಇಂತಹ ಅಪರಾಧಗಳನ್ನು ತಡೆಗಟ್ಟಲು ಹೆಚ್ಚಿನ ನಿಗಾ ವ್ಯವಸ್ಥೆ ಅಗತ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.