‘ಬಸವತತ್ವ ಮತ್ತು ತ್ರಿವಿಧ ಭಕ್ತರು’ ಲೇಖನದಲ್ಲಿ (ಸಂಗತ, ಏ. 21) ಡಾ. ಶಿವಮೂರ್ತಿ ಮುರುಘಾ ಶರಣರು ಆಧುನಿಕ ಯುಗದಲ್ಲಿನ ಅಣ್ಣನ ತ್ರಿವಿಧ ಭಕ್ತರನ್ನು ಗುರುತಿಸಿ ಸೂಕ್ಷ್ಮವಾಗಿ ಅವರ ಗುಣಾವಗುಣಗಳನ್ನು ಚಿತ್ರಿಸಿದ್ದಾರೆ.
ಆದರೆ ಹೀಗೆ ಗುರುತಿಸುವ ಭರದಲ್ಲಿ ಅಂದಿನ ಕಾಲದಲ್ಲಿ ಅಧಿಕಾರದ ಅಮಲಿನಲ್ಲಿ ರಾಜಾಶ್ರಯದಲ್ಲಿದ್ದಿರ ಬಹುದಾದ ಒಬ್ಬ ‘ವಿಪ್ರ’ ನುಡಿದಂತೆ ನಡೆಯದಿದ್ದನ್ನು ಕುರಿತು ‘ವಿಪ್ರರು ನುಡಿದಂತೆ ನಡೆಯರು... ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ...’ ಇತ್ಯಾದಿ ಎಂದು ಅಂದಿನ ಒಂದು ನಿಗದಿತ ವಿಪ್ರರ ಗುಂಪೊಂದನ್ನು ಕುರಿತು ಬಸವಣ್ಣ ಆಡಿದ ವಚನವನ್ನು ಉದಾಹರಿಸುತ್ತಾರೆ.
ಅಂದಮಾತ್ರಕ್ಕೆ ಸಾರಾಸಗಟಾಗಿ ಇಡೀ ವಿಪ್ರ ಸಮಾಜಕ್ಕೆ ಅದೇ ಸ್ವಭಾವವನ್ನು ಆರೋಪಿಸುವುದು ಸಮಂಜಸವಾಗಲಾರದು. ‘ಉದಾರ ಚರಿತಾನಾಂ ವಸುಧೈವ ಕುಟುಂಬಕಂ’, ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಮುಂತಾದ ಹೃದಯ ವೈಶಾಲ್ಯದಿಂದ ಒಡಗೂಡಿದ ಚಿಂತನೆಗಳನ್ನು ವೈದಿಕ ಸಮುದಾಯ ಕೊಟ್ಟಿದೆ.
ವಿಪ್ರರ ಒಂದು ಸಂಕುಚಿತ ಗುಂಪು ಅಂದಿನ ಸಾಮಾಜಿಕ ಸಂದರ್ಭಕ್ಕನುಸಾರ ವರ್ತಿಸಿರಬಹುದಾದ್ದನ್ನು ಆಧಾರವಾಗಿ ಇಟ್ಟುಕ್ಕೊಂಡು ಇಡೀ ವೈದಿಕ ಸಮುದಾಯವನ್ನು ಕುಟುಕುವುದು ಶರಣ ಶ್ರೇಷ್ಠರಿಗೆ ಶೋಭಿಸುವ ವಿಚಾರವಲ್ಲ.
ಸಿ.ಕೆ. ವಾಸುದೇವಮೂರ್ತಿ, ಬೆಂಗಳೂರು