ಮೈಸೂರು: ‘ಕನ್ನಡ ಸಾಹಿತ್ಯದಲ್ಲಿ ವಿಮರ್ಶಕರು ವಿರೋಧ ಪಕ್ಷದ ನೇತಾರರಲ್ಲ. ಹಾಗೆಯೇ, ಸಂಶೋಧಕರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲ’ ಎಂದು ಮೈಸೂರು ವಿವಿಯ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.
ಇಲ್ಲಿಯ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ‘ಬಸವಣ್ಣ; ತೌಲನಿಕ ತಾತ್ವಿಕತೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಆಶಯ ನುಡಿಗಳನ್ನಾಡಿದರು.
‘ವಿಮರ್ಶೆ ಎಂದರೆ ಟೀಕೆ ಮಾಡುವಂಥದ್ದಲ್ಲ. ಟೀಕು ಎಂದರೆ ಸರಿ. ಟೀಕುಗೆ ಬೇರೆ ಅರ್ಥವಿದೆ. ಆದರೆ, ಟೀಕೆ ಎಂದರೆ ಟೀಕೆ ಆಗಿರಬೇಕಿಲ್ಲ. ವಿಮರ್ಶೆ ಎಂದರೆ ಪ್ರಬುದ್ಧ ವಿಶ್ಲೇಷಣ ಪ್ರಕ್ರಿಯೆ. ಆ ಪ್ರಕ್ರಿಯೆ ಮುಖಾಂತರ ನಿಲುವಿಗೆ, ನೆಲೆಗೆ ತಲುಪಬಹುದು. ಜತೆಗೆ, ಕೃತಿಯ ಸಂದರ್ಭದಲ್ಲಿನ ಒಳನೋಟವನ್ನು ಸಹೃದಯರಿಗೆ ತೆರೆದಿಡಬೇಕು. ಆದರೆ, ವಿಮರ್ಶೆ ಎಂದರೆ ವಿರೋಧಿಸುವುದೇ ಆಗಬಾರದು. ಹೀಗಾಗಿ, ವಿಮರ್ಶೆ ಎಂದರೆ ವಿರೋಧಪಕ್ಷವಲ್ಲ; ಸಂಶೋಧನೆ ಎಂದರೆ ಸುಪ್ರೀಂ ಕೋರ್ಟ್ ಅಲ್ಲ. ನಾನು ಸಂಶೋಧನೆ ಮಾಡಿ ಹೇಳಿದ್ದೇ ಕಟ್ಟ ಕಡೆಯದು ಎಂದರೆ ಸ್ವಅಧ್ಯಾಯವಾಗುತ್ತದೆ. ಸಂಶೋಧನೆ ಎನ್ನುವಲ್ಲಿಯೇ ಶೋಧನೆ ಇದೆ’ ಎಂದು ವಿವರಿಸಿದರು.