ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು, ಇದೇ 26ರಂದು ನಡೆಯಲಿರುವ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಸಾರ್ಕ್ ದೇಶಗಳ ಮುಖ್ಯಸ್ಥರಿಗೆ ಆಹ್ವಾನ ನೀಡಿದ್ದಾರೆ. ಈ ಸದ್ಭಾವನೆಯ ಕ್ರಮ ಭರವಸೆದಾಯಕವಾದದ್ದು. ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧ ಸಾಧಿಸುವ ದಿಸೆಯಲ್ಲಿ ಇರಿಸಿದ ಮಹತ್ವದ ಹೆಜ್ಜೆ ಎನ್ನಬಹುದು.
ಪ್ರಧಾನಿಯೊಬ್ಬರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮ ನೆರೆಹೊರೆಯ ಏಳು ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿರುವುದು ಇದೇ ಮೊದಲು. ನೆರೆ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಹೊಂದುವ ಭಾರತದ ಕಾತುರತೆಗೆ ಇದು ಸಂಕೇತವಾಗಲಿದ್ದು ಈ ದಿಟ್ಟ ಕ್ರಮ ಸ್ಫೂರ್ತಿದಾಯಕ.
ಮೋದಿಯವರ ಟೀಕಾಕಾರ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೂ ಈ ವಿಚಾರದಲ್ಲಿ ಮೋದಿಯವರನ್ನು ಅಭಿನಂದಿಸಿದ್ದಾರೆ. ವಿಶೇಷವಾಗಿ, ಪಾಕಿಸ್ತಾನ ಪ್ರಧಾನಿಯವರಿಗೆ ನೀಡಿರುವ ಆಹ್ವಾನ, ಸಕಾರಾತ್ಮಕ ಮಾತುಕತೆಗಳಿಗೆ ಮುನ್ನುಡಿಯಾಗಬಹುದೆಂಬ ಆಶಯವನ್ನು ಒಮರ್ ವ್ಯಕ್ತ ಪಡಿಸಿದ್ದಾರೆ.
ಮೋದಿಯವರು ಪ್ರಧಾನಿ ಪಟ್ಟಕ್ಕೇರಿದ ನಂತರ ಭಾರತದ ವಿದೇಶಾಂಗ ನೀತಿ ಹೆಚ್ಚು ಆಕ್ರಮಣಕಾರಿಯಾಗಿರಬಹುದೆಂಬ ಭೀತಿಗಳನ್ನು ಈ ಕ್ರಮ ತೊಡೆದುಹಾಕುವಂತಹದ್ದು. ಭಾರತದ ಈಶಾನ್ಯದಿಂದ ವಲಸಿಗರನ್ನು ಉಚ್ಚಾಟಿಸಲಾಗುವುದೆಂಬ ಹೇಳಿಕೆಗಳನ್ನು ಚುನಾವಣಾ ಪ್ರಚಾರ ಭಾಷಣಗಳಲ್ಲಿ ನೀಡಿದ್ದ ಮೋದಿಯವರು ಬಾಂಗ್ಲಾದೇಶದಲ್ಲಿ ತಲ್ಲಣ ಮೂಡಿಸಿದ್ದರು.
ಹಾಗೆಯೇ ನ್ಯೂಯಾರ್ಕ್ನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಜೊತೆ ಮನಮೋಹನ್ ಸಿಂಗ್ ‘ಬಿರಿಯಾನಿ ಸಭೆ’ ನಡೆಸಿದ್ದಾರೆಂದು ಚುನಾವಣಾ ಪ್ರಚಾರ ಭಾಷಣಗಳಲ್ಲಿ ತೀವ್ರವಾಗಿ ಟೀಕಿಸಿದ್ದರು. ಆದರೆ ಈಗ ಮೋದಿ ಕೈಗೊಂಡಿರುವ ಈ ಅಚ್ಚರಿಯ ಕ್ರಮ ಹೊಚ್ಚಹೊಸತೆನಿಸುವಂತಹದ್ದು. ವಿಶ್ವಾಸವೃದ್ಧಿಗೆ ಸಹಾಯಕವಾಗುವಂತಹದ್ದು.
ಒಳ್ಳೆಯ ನೆರೆಹೊರೆಯ ಬಾಂಧವ್ಯ ಆರ್ಥಿಕ ಹಾಗೂ ರಾಜಕೀಯ ಲಾಭಗಳನ್ನು ತರುವಂತಹದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಜನರು ಮೋದಿಗೆ ಮಾರುಹೋಗಲು ಕಾರಣ ಅವರ ಅಭಿವೃದ್ಧಿಮಂತ್ರಗಳು. ಈ ಅಭಿವೃದ್ಧಿ ಹಾದಿಯಲ್ಲಿ ಸಾಗಲು ಮೋದಿಯವರು ಆರ್ಥಿಕ ಕಾರ್ಯಕ್ರಮಗಳಿಗೆ ಪುನಶ್ಚೇತನ ನೀಡಬೇಕಿದೆ.
ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲಾಗದ ಯುಪಿಎ ಸರ್ಕಾರದಿಂದಾಗಿ ಆವರಿಸಿರುವ ನಿಷ್ಕ್ರಿಯತೆಯನ್ನು ಮೊದಲಿಗೆ ಹೋಗಲಾಡಿಸಬೇಕು. ಹಣದುಬ್ಬರ ನಿಯಂತ್ರಿಸುವುದಲ್ಲದೆ ಲಕ್ಷಾಂತರ ಯುವ ಜನರಿಗೆ ಬೆಳಕಾಗುವ ಉದ್ಯೋಗಗಳ ಸೃಷ್ಟಿಗೆ ಆದ್ಯತೆ ನೀಡಬೇಕು. ಆರ್ಥಿಕ ರಾಜತಾಂತ್ರಿಕತೆಯ ಹೊಸ ಶಕೆ ಆರಂಭವಾಗಬೇಕು.
ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಇದು ಸಹಕಾರಿ. ಭಾರತಕ್ಕೆ ಕೋಟ್ಯಂತರ ರೂಪಾಯಿಗಳ ಹಣಹೂಡಿಕೆ ಬೇಕಿದೆ, ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಭಾರತದಲ್ಲಿ ಸೃಷ್ಟಿಸುವುದು ಈ ನಿಟ್ಟಿನಲ್ಲಿ ಮೊದಲ ಆದ್ಯತೆಯಾಗಬೇಕು. ಹೊರ ರಾಷ್ಟ್ರಗಳೊಂದಿಗೆ ಬಾಂಧವ್ಯ ಬಲವರ್ಧನೆ ಈ ದಿಸೆಯಲ್ಲಿ ಮೊದಲ ಹೆಜ್ಜೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ವೀಸಾ ನೀಡಲು ನಿರಾಕರಿಸಿದ್ದ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಮೋದಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಅಭಿನಂದನೆ ಸಲ್ಲಿಸಿವೆ. ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಯಾವ ರಾಷ್ಟ್ರವೂ ಕಡೆಗಣಿಸುವುದು ಸಾಧ್ಯವಿಲ್ಲ ಎಂಬುದಕ್ಕೆ ಇದು ದ್ಯೋತಕ. ಇದಕ್ಕೆ ಸರಿಯಾಗಿ ಮೋದಿಯವರೂ ಸ್ಪಂದಿಸಿರುವುದು ಸಕಾರಾತ್ಮಕವಾದ ನಡೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.