ಬೆಂಗಳೂರು: ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ನೀಡುವ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಮಲಯಾಳಂ ಭಾಷೆಯ ಹಿರಿಯ ಸಾಹಿತಿ ಪ್ರೊ.ಕೆ.ಸಚ್ಚಿದಾನಂದನ್ ಆಯ್ಕೆಯಾಗಿದ್ದಾರೆ.
‘ಪ್ರಶಸ್ತಿಯು ರೂ 5 ಲಕ್ಷ ನಗದು ಒಳಗೊಂಡಿದೆ. ಕುವೆಂಪು ಅವರ ಜನ್ಮದಿನವಾದ ಡಿ. 29ರಂದು ಕುಪ್ಪಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂ.ಪ.ನಾಗರಾಜಯ್ಯ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪ್ರಶಸ್ತಿಯನ್ನು ಈ ವರ್ಷದಿಂದಲೇ ಆರಂಭಿಸಲಾಗಿದ್ದು, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಪ್ರೊ.ಬಿ.ಎ.ವಿವೇಕ ರೈ ಹಾಗೂ ಡಾ. ಪುರುಷೋತ್ತಮ ಬಿಳಿಮಲೆ ಸಮಿತಿಯ ಸದಸ್ಯರಾಗಿದ್ದರು’ ಎಂದು ಅವರು ತಿಳಿಸಿದರು. ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಖಜಾಂಜಿ ಡಿ.ಎಂ.ಮನುದೇವ್ ದೇವಂಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪರಿಚಯ: ಸಚ್ಚಿದಾನಂದನ್ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ಸಾಹಿತ್ಯ ಅಕಾಡೆಮಿಯ ಪತ್ರಿಕೆ ‘ಇಂಡಿಯನ್ ಲಿಟರೇಚರ್’ನ ಸಂಪಾದಕರಾಗಿದ್ದರು.
10 ವರ್ಷಗಳ ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದರು. 23 ಕವನ ಸಂಕಲನಗಳು, 16 ಅನುವಾದ ಕವನ ಸಂಕಲನಗಳು, ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿರುವ 21 ಸಂಕಲನಗಳು ಪ್ರಕಟವಾಗಿವೆ. ಅವರ ಕುರಿತು ‘ಸಮ್ಮರ್ ರೈನ್ (ಗ್ರೀಷ್ಮ ವರ್ಷ)’ ಎಂಬ ಸಾಕ್ಷ್ಯಚಿತ್ರ ಸಿದ್ಧವಾಗಿದೆ.