ನವದೆಹಲಿ: ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರವಾಗಿರುವ ಜಮ್ಮು–ಕಾಶ್ಮೀರದಲ್ಲಿ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿರುವ ಬಿಜೆಪಿ, ಸರ್ಕಾರ ರಚನೆ ಸಾಧ್ಯತೆ ಕುರಿತು ಪರಿಶೀಲಿಸಲು ಬುಧವಾರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಬ್ಬರು ಹಿರಿಯ ನಾಯಕರ ಸಮಿತಿ ರಚಿಸಿದೆ.
ಜಮ್ಮು– ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭೆ ಫಲಿತಾಂಶ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಸಮ್ಮುಖದಲ್ಲಿ ಸೇರಿದ್ದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಉಭಯ ರಾಜ್ಯಗಳಲ್ಲೂ ಪಕ್ಷದ ಸಾಧನೆ ಕುರಿತು ಸಭೆ ತೃಪ್ತಿ ವ್ಯಕ್ತಪಡಿಸಿತು.
ಅರುಣ್ ಜೇಟ್ಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಕಣಿವೆಗೆ ವೀಕ್ಷಕರಾಗಿ ತೆರಳುವರು. ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಸರ್ಕಾರ ರಚನೆ ಕುರಿತು ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಜತೆ ಮಾತುಕತೆ ನಡೆಸುವರು. ಜಾರ್ಖಂಡ್ಗೆ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಬಿಜೆಪಿ ಉಪಾಧ್ಯಕ್ಷ ವಿನಯ ಸಹಸ್ರಬುದ್ಧೆ ಅವರನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ಭಾಗಿ-ಯಾಗಲು ಬಿಜೆಪಿ ಬಯಸಿದೆ. ಎಲ್ಲ ಆಯ್ಕೆಗಳನ್ನು ಪಕ್ಷ ಮುಕ್ತವಾಗಿ ಇಟ್ಟುಕೊಂಡಿದೆ. ಮೂರ್ನಾಲ್ಕು ದಿನಗಳಲ್ಲಿ ವೀಕ್ಷಕರು ಎರಡೂ ರಾಜ್ಯಗಳಿಗೆ ಹೋಗಲಿದ್ದಾರೆ. ವರ್ಷದ ಅಂತ್ಯದೊಳಗೆ ಎರಡೂ ಕಡೆ ಸರ್ಕಾರ ರಚನೆ ಆಗಲಿದೆ ಎಂದು ನಡ್ಡಾ ಸಂಸದೀಯ ಮಂಡಳಿ ಸಭೆ ಬಳಿಕ ಪತ್ರಕರ್ತರಿಗೆ ತಿಳಿಸಿದರು.
ಕಣಿವೆ ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಮತ ಗಳಿಸಿದೆ. ಜನ ಮೋದಿ ಅವರ ‘ಅಭಿವೃದ್ಧಿ ಕಾರ್ಯಸೂಚಿ’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು