ಸದ್ದಿಲ್ಲದೆ ಸಾಧನೆ ಮಾಡುತ್ತಿರುವ ಸಾಧಕರಿಗೆ ನಮ್ಮಲ್ಲೇನೂ ಬರವಿಲ್ಲ. ಆದರೆ ಇಂತಹವರನ್ನು ಹುಡುಕಲು ನಮ್ಮ ಮಾಧ್ಯಮಗಳಿಗೆ ಸಮಯವಿಲ್ಲ. ಯಾರದೋ ಹುಚ್ಚಾಟಗಳಿಗೆ ವ್ಯರ್ಥವಾದ, ಸತ್ವವಿಲ್ಲದ ಪ್ರಶ್ನೆಗಳನ್ನು ಕೇಳುವುದರಲ್ಲೇ, ಚರ್ಚೆಗಳನ್ನು ಮಾಡುವುದರಲ್ಲೇ ಮುಳುಗಿರುವ ಮಾಧ್ಯಮಗಳು ಜನರ ಆತ್ಮವಿಶ್ವಾಸ, ಧನಾತ್ಮಕ ಭಾವನೆಗಳಿಗೆ ಮಸಿ ಬಳಿಯುತ್ತಿವೆ.
ಕೇವಲ ಅತ್ಯಾಚಾರ, ಅನಾಚಾರ, ಜ್ಯೋತಿಷ, ಸರಳವಾಸ್ತು, ಕಾಲಭವಿಷ್ಯದಂಥ ಸುದ್ದಿಗಳು, ಜಾಹೀರಾತುಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ಯಾವುದೋ ಒಂದು ಘಟನೆ ಸಿಕ್ಕಿದರೆ ನಾಲ್ಕು ದಿನಕ್ಕೆ ಬೇಕಾಗುವ ಆಹಾರ ಸಿಕ್ಕಿದಷ್ಟು ಸಂತೋಷ ಮಾಧ್ಯಮಗಳಿಗೆ. ಅದೇ ವಿಷಯ, ಮತ್ತದೇ ದೃಶ್ಯಾವಳಿಗಳನ್ನು ಪ್ರಚಾರ ಮಾಡುತ್ತಲೇ ಇರುತ್ತವೆ. ಮಾಧ್ಯಮಗಳು ಇಂತಹ ವಿಷಯಗಳನ್ನು ಬಿಟ್ಟು, ಜನರಲ್ಲಿ ವಿಶ್ವಾಸ ಮೂಡಿಸುವ ವಿಷಯಗಳತ್ತ ಗಮನಹರಿಸಬೇಕಾಗಿದೆ.