ನವದೆಹಲಿ (ಪಿಟಿಐ): ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಹಾಗೂ ಪ್ರತಿಯೊಬ್ಬ ದೇಶವಾಸಿ ಬೆಂಬಲವೂ ನಿಮಗಿದೆ ಎಂಬ ಸಂದೇಶವನ್ನು ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಿಯಾಚಿನ್ಗೆ ತೆರಳಿದ್ದಾರೆ.
ಬಳಿಕ ಮೋದಿ ಅವರು ಶ್ರೀನಗರದಲ್ಲಿ ಪ್ರವಾಹ ಸಂತ್ರಸ್ತರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ.
‘ಸ್ನೇಹಿತರೆ ನಾನು ಸಿಯಾಚಿನ್ಗೆ ತೆರಳುತ್ತಿದ್ದೇನೆ. ಈ ವಿಶೇಷ ದಿನವನ್ನು ವೀರ ಯೋಧರೊಂದಿಗೆ ಕಳೆಯಲು ಸಾಧ್ಯವಾಗುತ್ತಿರುವುದು ನಮ್ಮ ಅದೃಷ್ಟ’ ಎಂದು ಪ್ರವಾಸಕ್ಕೂ ಮುನ್ನ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
‘ನಾವು ಯಾವಾಗಲೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂಬ ಸಂದೇಶವನ್ನು ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಸೈನಿಕರಿಗೆ ತಲುಪಿಸಲು ತೆರಳುತ್ತಿರುವೆ’ ಎಂದು ಅವರು ಹೇಳಿದ್ದಾರೆ.
ಅಲ್ಲದೇ, ‘ಸಿಯಾಚಿನ್ ಭೇಟಿಯ ಬಳಿಕ ಶ್ರೀನಗರದಲ್ಲಿ ಇತ್ತೀಚಿಗೆ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರೊಂದಿಗೆ ಸಮಯ ಕಳೆಯುವೆ’ ಎಂದೂ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.