ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಯು ಲರಿಸಂನಿಂದ ಧಾರ್ಮಿಕ ಮೌಲ್ಯಕ್ಕೆ ಧಕ್ಕೆ

Last Updated 30 ಜನವರಿ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಸೆಕ್ಯುಲರಿಸಂನಿಂದಾಗಿ (ಜಾತ್ಯತೀತ ವಾದ)  ಧಾರ್ಮಿಕ ಮೌಲ್ಯಗಳು ಮರೆಯಾ­ಗುತ್ತಿವೆ’ ಎಂದು ರಾಮಕೃಷ್ಣಾಶ್ರಮದ ಸ್ವಾಮಿ ಹರ್ಷಾನಂದಜೀ ಹೇಳಿದರು.

ಧರ್ಮ ಜಾಗೃತಿ ಟ್ರಸ್ಟ್‌ ವತಿಯಿಂದ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಆರ್ಷಧಾರಾ’ ಅಂತರರಾಷ್ಟ್ರೀಯ ವೇದ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೂ ಸಮಾಜದಲ್ಲಿ ಅನೇಕ ಜಾತಿ ಹಾಗೂ ಗುಂಪುಗಳು ಹುಟ್ಟಿಕೊಂಡಿವೆ. ಧರ್ಮಕ್ಕಿಂತ ಜಾತಿ ಮುಖ್ಯ ಎಂಬ ಭಾವನೆ ಹೆಚ್ಚಾಗುತ್ತಿದೆ. ಇದರಿಂದ ಹಿಂದೂ ಧರ್ಮದಲ್ಲಿ ಭಾವೈಕ್ಯ  ಮರೆಯಾ­ಗುತ್ತಿದೆ’ ಎಂದರು.

ಜಾತಿಯನ್ನು ಮರೆತು ಧರ್ಮವನ್ನು ಆಚರಣೆಗೆ ತರಬೇಕಾದ ಅಗತ್ಯ ಇದೆ. ಸಮಾಜದಲ್ಲಿ ಧರ್ಮ­ವನ್ನು ಎತ್ತಿ ಹಿಡಿಯಲು ಇಂತಹ ಸಮಾವೇಶ­ಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದರು.

ಸನಾತನ ಧರ್ಮದ ಮೂಲ ವೇದ. ವೇದ ಎಂದರೆ ಜ್ಞಾನ. ವೇದಗಳ ಅಧ್ಯಯನದಿಂದ  ವಿವಿಧ ಕ್ಷೇತ್ರಗಳ ಜ್ಞಾನ ಲಭ್ಯವಾಗುತ್ತದೆ.  ಋಷಿ ಪರಂಪರೆಯಿಂದ ವೇದಗಳು ಬೆಳೆದುಬಂದಿವೆ. ಧರ್ಮವನ್ನು ಉಳಿಸಲು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು.

ವೇದ ವಿಜ್ಞಾನ ಗುರುಕುಲದ ನಿರ್ದೇಶಕ ಡಾ.ರಾಮಚಂದ್ರ ಭಟ್ಟ ಕೋಟೆಮನೆ ಮಾತನಾಡಿ, ‘ಋಷಿ ಪರಂಪರೆಯಲ್ಲಿ ಉನ್ನತ ಮಟ್ಟದಲ್ಲಿದ್ದ ಸಂಸ್ಕೃತವು ರಾಜಾಶ್ರಯದಲ್ಲಿ ಗದ್ಯ, ಪದ್ಯಗಳ ರಚನೆಗೆ ಸೀಮಿತವಾಯಿತು. ರಾಜಾಶ್ರಯದಲ್ಲಿ ವಿದ್ವಾಂಸರು  ಮೈಮರೆತಿದ್ದರಿಂದ ವೇದ ಶಾಖೆಗಳು ಕಣ್ಮರೆಯಾದವು’ ಎಂದು ಹೇಳಿದರು.

ಸಂಸ್ಕೃತ ಕೇವಲ ಭಾಷೆ ಅಲ್ಲ. ಅದರಲ್ಲಿ ಸಂಸ್ಕಾರ ಗುಣ ಇದೆ. ಶಾಲೆ ಕಾಲೇಜುಗಳ ಪ್ರಥಮ ಭಾಷೆಯಾಗಿದ್ದ ಸಂಸ್ಕೃತವು ಇಂದು ಶಾಲೆಗಳಿಂದಲೂ ಮರೆಯಾಗುತ್ತಿರುವುದು ಆತಂಕದ ಸಂಗತಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT