ಬೆಂಗಳೂರು: ‘ಸೆಕ್ಯುಲರಿಸಂನಿಂದಾಗಿ (ಜಾತ್ಯತೀತ ವಾದ) ಧಾರ್ಮಿಕ ಮೌಲ್ಯಗಳು ಮರೆಯಾಗುತ್ತಿವೆ’ ಎಂದು ರಾಮಕೃಷ್ಣಾಶ್ರಮದ ಸ್ವಾಮಿ ಹರ್ಷಾನಂದಜೀ ಹೇಳಿದರು.
ಧರ್ಮ ಜಾಗೃತಿ ಟ್ರಸ್ಟ್ ವತಿಯಿಂದ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಆರ್ಷಧಾರಾ’ ಅಂತರರಾಷ್ಟ್ರೀಯ ವೇದ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೂ ಸಮಾಜದಲ್ಲಿ ಅನೇಕ ಜಾತಿ ಹಾಗೂ ಗುಂಪುಗಳು ಹುಟ್ಟಿಕೊಂಡಿವೆ. ಧರ್ಮಕ್ಕಿಂತ ಜಾತಿ ಮುಖ್ಯ ಎಂಬ ಭಾವನೆ ಹೆಚ್ಚಾಗುತ್ತಿದೆ. ಇದರಿಂದ ಹಿಂದೂ ಧರ್ಮದಲ್ಲಿ ಭಾವೈಕ್ಯ ಮರೆಯಾಗುತ್ತಿದೆ’ ಎಂದರು.
ಜಾತಿಯನ್ನು ಮರೆತು ಧರ್ಮವನ್ನು ಆಚರಣೆಗೆ ತರಬೇಕಾದ ಅಗತ್ಯ ಇದೆ. ಸಮಾಜದಲ್ಲಿ ಧರ್ಮವನ್ನು ಎತ್ತಿ ಹಿಡಿಯಲು ಇಂತಹ ಸಮಾವೇಶಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದರು.
ಸನಾತನ ಧರ್ಮದ ಮೂಲ ವೇದ. ವೇದ ಎಂದರೆ ಜ್ಞಾನ. ವೇದಗಳ ಅಧ್ಯಯನದಿಂದ ವಿವಿಧ ಕ್ಷೇತ್ರಗಳ ಜ್ಞಾನ ಲಭ್ಯವಾಗುತ್ತದೆ. ಋಷಿ ಪರಂಪರೆಯಿಂದ ವೇದಗಳು ಬೆಳೆದುಬಂದಿವೆ. ಧರ್ಮವನ್ನು ಉಳಿಸಲು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು.
ವೇದ ವಿಜ್ಞಾನ ಗುರುಕುಲದ ನಿರ್ದೇಶಕ ಡಾ.ರಾಮಚಂದ್ರ ಭಟ್ಟ ಕೋಟೆಮನೆ ಮಾತನಾಡಿ, ‘ಋಷಿ ಪರಂಪರೆಯಲ್ಲಿ ಉನ್ನತ ಮಟ್ಟದಲ್ಲಿದ್ದ ಸಂಸ್ಕೃತವು ರಾಜಾಶ್ರಯದಲ್ಲಿ ಗದ್ಯ, ಪದ್ಯಗಳ ರಚನೆಗೆ ಸೀಮಿತವಾಯಿತು. ರಾಜಾಶ್ರಯದಲ್ಲಿ ವಿದ್ವಾಂಸರು ಮೈಮರೆತಿದ್ದರಿಂದ ವೇದ ಶಾಖೆಗಳು ಕಣ್ಮರೆಯಾದವು’ ಎಂದು ಹೇಳಿದರು.
ಸಂಸ್ಕೃತ ಕೇವಲ ಭಾಷೆ ಅಲ್ಲ. ಅದರಲ್ಲಿ ಸಂಸ್ಕಾರ ಗುಣ ಇದೆ. ಶಾಲೆ ಕಾಲೇಜುಗಳ ಪ್ರಥಮ ಭಾಷೆಯಾಗಿದ್ದ ಸಂಸ್ಕೃತವು ಇಂದು ಶಾಲೆಗಳಿಂದಲೂ ಮರೆಯಾಗುತ್ತಿರುವುದು ಆತಂಕದ ಸಂಗತಿ ಎಂದರು.