ಮೈಸೂರು: ಜಗತ್ತಿನ ಎತ್ತರದ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ನಡೆದ ಭಾರೀ ಹಿಮಕುಸಿತಕ್ಕೆ ಸಿಲುಕಿ ಮಡಿದಿರುವ ಸೈನಿಕರ ಕುಟುಂಬಗಳಿಗೆ ಮೈಸೂರು ವಿ.ವಿ.ಯಿಂದ ನೆರವು ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಈ ಕುರಿತು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಮೈಸೂರು ವಿ.ವಿ ವ್ಯಾಪ್ತಿಗೆ ಬರುವ ಸೈನಿಕರ ಮಕ್ಕಳಿಗೆ ಶೈಕ್ಷಣಿಕ ಸವಲತ್ತು ನೀಡುವ ಚಿಂತನೆ ನಡೆಸಲಾಗುವುದು’ ಎಂದು ಹೇಳಿದರು.
‘ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮಕ್ಕಳಿಗೆ ಶೈಕ್ಷಣಿಕ ಸವಲತ್ತು ನೀಡುವ ನಿರ್ಧಾರವನ್ನು ಮೈಸೂರು ವಿ.ವಿ ಈಗಾಗಲೇ ತೆಗೆದುಕೊಂಡಿದೆ. ಇದೇ ರೀತಿ, ಸೈನಿಕರ ಮಕ್ಕಳಿಗೂ ಸೌಲಭ್ಯ ನೀಡುವ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಮಾಜಸೇವಾ ಕಾರ್ಯದಲ್ಲಿ ವಿ.ವಿ.ಗಳು ತೊಡಗಿಕೊಳ್ಳಬೇಕು. ಆಗಲೇ ವಿ.ವಿ.ಗಳು ಸ್ಥಾಪನೆಗೊಂಡ ಉದ್ದೇಶ ಈಡೇರುವುದು’ ಎಂದು ಕುಲಪತಿಗಳು ಹೇಳಿದರು.