ಬೆಂಗಳೂರು: ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಚಂದ್ರಶೇಖರ್ (40) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ನಗರದ ಒಂಬತ್ತನೇ ತ್ವರಿತ ನ್ಯಾಯಾಲಯ, ‘ಅಪರಾಧಿಯು ಜೈಲಿನಲ್ಲಿ ದುಡಿದು ಮೃತರ ಪತ್ನಿ ಹಾಗೂ ತಾಯಿಗೆ ತಲಾ ₨ 25 ಸಾವಿರ ಪರಿಹಾರ ನೀಡಬೇಕು’ ಎಂದು ಆದೇಶ ಹೊರಡಿಸಿದೆ.
ಕಮಲಾನಗರ ಸಮೀಪದ ಶಕ್ತಿಗಣಪತಿನಗರ ನಿವಾಸಿಯಾದ ಚಂದ್ರಶೇಖರ್, ಸ್ನೇಹಿತ ಜಗನ್ ಉರುಫ್ ಕುಟ್ಟಿ ಎಂಬುವರನ್ನು 2012ರ ಆಗಸ್ಟ್ 14ರಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಘಟನೆ ನಡೆದ ಮರುದಿನವೇ ಆರೋಪಿಯನ್ನು ಬಂಧಿಸಿದ್ದ ಬಸವೇಶ್ವರನಗರ ಪೊಲೀಸರು, ವಿಚಾರಣೆ ನಡೆಸಿ ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪ ಪಟ್ಟಿಯ ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಜೋಷಿ ವೆಂಕಟೇಶ್, ‘ಕೊಲೆ ಆರೋಪ ಸಾಬೀತಾದ ಕಾರಣ ಚಂದ್ರಶೇಖರ್ನಿಗೆ ಜೀವಾವಧಿ ಶಿಕ್ಷೆ ಮತ್ತು ₨ 10 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಗೆ ತಪ್ಪಿದರೆ ಹೆಚ್ಚುವರಿ ಆರು ತಿಂಗಳು ಸಾದಾ ಸಜೆ ಅನುಭವಿಸಬೇಕು. ಕಾರಾಗೃಹದಲ್ಲಿ ದುಡಿದು ಜಗನ್ ಅವರ ಪತ್ನಿಗೆ ₨ 25 ಸಾವಿರ ಹಾಗೂ ತಾಯಿಗೆ ₨ 25 ಸಾವಿರ ಪರಿಹಾರ ನೀಡಬೇಕು’ ಎಂದು ಆದೇಶಿಸಿದರು.
ಕೊಲೆಗೆ ಕಾರಣ: ಜಗನ್ ಅವರು ಆಗಾಗ್ಗೆ ಚಂದ್ರಶೇಖರ್ನ ಮನೆಗೆ ಹೋಗಿ ಬರುತ್ತಿದ್ದರು. ಹೀಗಾಗಿ ಸ್ನೇಹಿತ ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಶಂಕೆ ಚಂದ್ರಶೇಖರನಲ್ಲಿ ಮೂಡಿತ್ತು. ಇದೇ ವಿಷಯವಾಗಿ ಪರಸ್ಪರರ ನಡುವೆ ಜಗಳವಾಗಿತ್ತು.
ಸ್ವಾತಂತ್ರ್ಯ ದಿನದ ಅಂಗವಾಗಿ ಆ.14ರ ರಾತ್ರಿ 12 ಗಂಟೆಗೆ ಕಮಲಾನಗರ 4ನೇ ಅಡ್ಡರಸ್ತೆ ನಿವಾಸಿಗಳು ಧ್ವಜಾರೋಹಣಾ ಮಾಡಿದ್ದರು. ಈ ವೇಳೆ ಅಲ್ಲಿಗೆ ಬಂದ ಜಗನ್ ಮೇಲೆ ಎರಗಿದ್ದ ಚಂದ್ರಶೇಖರ್, ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪತ್ನಿಯ ಎದುರೇ ಕೊಲೆ ಮಾಡಿದ್ದ.