ಬೆಂಗಳೂರು: ‘ರಾಜ್ಯದಲ್ಲಿ ಅನೇಕ ಸ್ಮಾರಕಗಳಿದ್ದು, ಅವುಗಳ ಮಾಹಿತಿ ದಾಖಲಿಸುವ ಕೆಲಸ ಆಗಬೇಕಾಗಿದೆ’ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವಿಸಸ್ ಅಧ್ಯಕ್ಷ ಟಿ.ವಿ. ಮೋಹನದಾಸ್ ಪೈ ಅಭಿಪ್ರಾಯಪಟ್ಟರು.
ವಿಶ್ವ ಪರಂಪರೆ ದಿನದ ಅಂಗವಾಗಿ ಬೆಂಗಳೂರು ಕೋಟೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವ ಪರಂಪರೆಯ ಸ್ಮಾರಕಗಳು’ ಮತ್ತು ‘ಬೆಂಗಳೂರು ವಲಯದ ಪ್ರಮುಖ ಸ್ಮಾರಕಗಳ’ ಛಾಯಾಚಿತ್ರ ಪ್ರದರ್ಶನದಲ್ಲಿ ಮಾತನಾಡಿದರು.
‘ನಮ್ಮ ದೇಶಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಐತಿಹಾಸಿಕ ಸ್ಮಾರಕಗಳು ಕಡಿಮೆ. ಆದರೆ, ಅವರು ಸಣ್ಣಪುಟ್ಟ ಸ್ಮಾರಕಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿಯನ್ನು ದಾಖಲಿಸಿದ್ದಾರೆ’ ಎಂದರು.
‘ಅಮೆರಿಕ, ಬ್ರಿಟನ್ನಲ್ಲಿ ಪ್ರತಿಯೊಂದನ್ನು ಸರಿಯಾಗಿ ದಾಖಲಿಸಿದ್ದಾರೆ. ಇದರಿಂದ ಜನರಿಗೆ ಬೇಕಾದ ಮಾಹಿತಿ ಸಿಗುತ್ತದೆ’ ಎಂದು ಹೇಳಿದರು.
‘ಮುಂದಿನ ತಲೆಮಾರಿಗೆ ನಮ್ಮ ಇತಿಹಾಸದ ಬಗ್ಗೆ ತಿಳಿಸಿಕೊಡಲು ಸ್ಮಾರಕಗಳನ್ನು ಸಂರಕ್ಷಿಸಬೇಕಾಗಿದೆ’ ಎಂದರು.
ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ ಡಾ. ಟಿ. ಅರುಣ್ ರಾಜ್ ಮಾತನಾಡಿ, ‘ಟಿಪ್ಪು ಶಸ್ತ್ರಾಗಾರವನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಮುಂದುವರೆದಿದೆ’ ಎಂದರು.
‘ಯುನೆಸ್ಕೊ ಘೋಷಣೆಯಂತೆ ವಿಶ್ವ ಪರಂಪರೆ ದಿನ ಆಚರಿಸಲಾಗುತ್ತಿದೆ. ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ಖಾಸಗಿಯವರ ಬೆಂಬಲ ಬೇಕಾಗಿದೆ’ ಎಂದರು.
ಇದೇ ವೇಳೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಸ್ಮಾರಕಗಳಿಗೆ ಸಂಬಂಧಿಸಿದ ಮಾಹಿತಿ ಒಳಗೊಂಡ ‘ಕಲಾ ವೈಭವ’ ಕಿರು ಹೊತ್ತಿಗೆ ಹಾಗೂ ‘ಇನ್ಟ್ಯಾಕ್ ಸೋನಾಟ ಆ್ಯಪ್’ ಬಿಡುಗಡೆ ಮಾಡಲಾಯಿತು.
ಸತ್ಯಪ್ರಕಾಶ್, ಎಸ್ಪಿವಿ ಹಳಕಟ್ಟಿ ಉಪಸ್ಥಿತರಿದ್ದರು. ಡಾ. ಎನ್. ರಾಜಂ ಅವರು ಹಿಂದೂಸ್ತಾನಿ ಹಾಗೂ ಟಿ.ಎಂ. ಕೃಷ್ಣ ಅವರು ಕರ್ನಾಟಕ ಸಂಗೀತ ಕಛೇರಿ ನಡೆಸಿಕೊಟ್ಟರು.
ಭಾರತೀಯ ಪುರಾತತ್ವ ಇಲಾಖೆ ಮತ್ತು ಇನ್ಟ್ಯಾಕ್ ಬೆಂಗಳೂರು ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು.