ಹನುಮಸಾಗರ: ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆಗೆ ಬೇಸತ್ತಿದ್ದ ಜನರಿಗೆ ಒಂದು ವಾರದಿಂದ ಮಳೆ ವಿರಾಮ ನೀಡಿತ್ತು. ಪ್ರಖರ ಸೂರ್ಯನ ಕಿರಣಗಳು ಭೂಮಿಗೆ ಬೀಳುವಂತಾಗಿದ್ದವು.
ಆದರೆ ಮಂಗಳವಾರ ಸಂಜೆ ಹನುಮಸಾಗರ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಅರ್ಧ ಗಂಟೆಗೂ ಹಚ್ಚು ಕಾಲ ಗುಡುಗು ಸಹಿತ ಮಳೆ ಸುರಿದು ಮತ್ತೆ ಮಳೆ ಆರಂಭದ ಸೂಚನೆ ನೀಡಿದೆ. ಹನುಮನಾಳ, ಅಡವಿಭಾವಿ, ಹೂಲಗೇರಿ, ಮಡ್ಡಿಕೇರಿ, ಚಳಗೇರಿಯಲ್ಲಿಯೂ ರಭಸದಿಂದ ಮಳೆ ಸುರಿದಿದೆ.
ಈಗಾಗಲೇ ಬಹುತೇಕ ಬೆಳೆಗಳು ಮಳೆಗೆ ಆಹುತಿಯಾಗಿದ್ದು, ಮಳೆ ಮುಂದುವರೆದರೆ ಅಳಿದುಳಿದ ಬೆಳೆಗಳಿಗೆ ಹಾನಿ ಉಂಟಾಗವು ಸಾಧ್ಯತೆ ಇದೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.
ಕೊಂಚ ಹಿಂದೆ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಬೆಳೆ ಸದ್ಯ ಕೊಯ್ಲಿಗೆ ಬಂದಿದೆ. ಮಳೆ ಆರಂಭವಾಗಿರುವುದರಿಂದ ಅದೂ ಕೈಬಿಡುವ ಲಕ್ಷಣಗಳು ಕಾಣುತ್ತವೆ ಎಂದು ಸೋಮಪ್ಪ ತೋಪಲಕಟ್ಟಿ ವಿಷಾದ ವ್ಯಕ್ತಪಡಿಸುತ್ತಾರೆ.
ನಾಲ್ಕು ವರ್ಷಗಳಿಂದ ಬರಗಾಲ ಕಂಡಿದ್ದ ನಮಗೆ ಈ ಬಾರಿ ಹಸಿ ಬರಗಾಲ ಬಂದಿದೆ, ಮನೆ ಈಗೋ ಆಗೊ ಬೀಳುವಂತಿದೆ, ಜಮೀನುಗಳಲ್ಲಿ ಬೆಳೆಯ ಬದಲಿಗೆ ಕಸ ಬೆಳೆದು ನಿಂತಿದೆ, ಬಣವಿಯಲ್ಲಿ ಮೇವು ಖಾಲಿಯಾಗಿ ಜಾನುವಾರಗಳ ಹೊಟ್ಟೆಯ ಚಿಂತೆ ಕಾಡುತ್ತಿದೆ ಇಂತಹ ಸಂದರ್ಭದಲ್ಲಿ ಮತ್ತೆ ಮಳೆ ಆರಂಭವಾಗಿದ್ದು ನಮಗೆ ದಿಕ್ಕು ತೋಚದಂತಾಗಿದೆ ಎಂದು ಅಡವಿಭಾವಿ ಗ್ರಾಮದ ಛತ್ರಪ್ಪ ನೋವು ತೋಡಿಕೊಂಡರು.