ನವದೆಹಲಿ (ಪಿಟಿಐ): ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿ ಹೋರಾಟ ನಡೆಸಲಿದೆ ಎಂದು ಪಕ್ಷದ ವಕ್ತಾರ ಶಾಹ್ ನವಾಜ್ ಹುಸೇನ್ ಹೇಳಿದ್ದಾರೆ.
‘ಜನಹಿತ್ ಕಾಂಗ್ರೆಸ್ ಪಕ್ಷದ ಮುಖಂಡ ಕುಲ್ದೀಪ್ ಬಿಶ್ನೋಯ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಅವರು ಪಡೆಯೇ ಇಲ್ಲದ ಸೇನಾನಿಯಂತೆ’ ಎಂದು ಹುಸೇನ್ ಕುಹಕವಾಡಿದ್ದಾರೆ.
‘ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಚುನಾವಣೆಯಲ್ಲಿ ಜಯ ಸಾಧಿಸಲಿದೆ. ಪಕ್ಷ ಮುಂಬರುವ ದಿನದಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಬಿಜೆಪಿ ಪಕ್ಷ ಏನು ಎಂಬುದು ಕುಲ್ದೀಪ್ ಅವರಿಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅವರಿಗೆ ವಾಸ್ತವ ಅರಿವಾಗುವ ದಿನಗಳು ದೂರವಿಲ್ಲ. ಆದಷ್ಟು ಬೇಗ ಅವರು ತಮ್ಮ ಭ್ರಮಾಲೋಕದಿಂದ ಹೊರಬರಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.