ಪಂಚಕುಲಾ (ಪಿಟಿಐ): ಹರಿಯಾಣದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಇಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಖಟ್ಟರ್ ಮತ್ತು ಅವರ ಹತ್ತು ಮಂದಿ ಸಚಿವರಿಗೆ ರಾಜ್ಯಪಾಲ ಕಪ್ತಾನ್ ಸಿಂಗ್ ಸೋಲಂಕಿ ಅವರು ಪ್ರಮಾಣವಚನ ಬೋಧಿಸಿದರು.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಕೇಂದ್ರದ ಅನೇಕ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು, ಐಎನ್ಎಲ್ಡಿ ಪಕ್ಷದ ಅಭಯ್ ಚೌತಾಲಾ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಇನ್ನಿತರ ರಾಜಕೀಯ ಮುಖಂಡರು ಇದ್ದರು.
ಮೊದಲ ಬಾರಿಗೆ ಹರಿಯಾಣ ವಿಧಾನಸಭೆ ಪ್ರವೇಶಿಸಿರುವ ಖಟ್ಟರ್ ಅವರಿಗೆ ನಾಲ್ಕು ದಶಕಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡನಾಟವಿದೆ. ನಿಷ್ಕಳಂಕ ಚಾರಿತ್ರ್ಯ, ಸಂಘಟನಾ ಸಾಮರ್ಥ್ಯಕ್ಕೆ ಹೆಸರಾದವರು. 60 ವರ್ಷದ ಖಟ್ಟರ್ ಅವಿವಾಹಿತರು. ಜಾಟ್ ಸಮುದಾಯದವರಲ್ಲದ ಹರಿಯಾಣದ ಐದನೇ ಮುಖ್ಯಮಂತ್ರಿ ಮತ್ತು ಪಂಜಾಬ್ ಮೂಲದ ಮೊದಲ ವ್ಯಕ್ತಿ.