ಚಂಡೀಗಡ (ಪಿಟಿಐ): ಹರಿಯಾಣದಲ್ಲಿ ಇದೇ ಮೊದಲ ಸಲ ಅಧಿಕಾರ ಹಿಡಿಯಲಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಈಗಾಗಲೇ ಆಕಾಂಕ್ಷಿಗಳು ಕೇಂದ್ರ ಮಟ್ಟದಲ್ಲಿ ಬಿರುಸಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿರುವುದು ಕೇಂದ್ರ ನಾಯಕತ್ವಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಜಟಿಲಗೊಳಿಸಬಹುದು.
ರಾಜ್ಯದ ಜನಸಂಖ್ಯೆಯಲ್ಲಿ ಶೇ 25ರಷ್ಟು ಜಾಟ್ ಸಮುದಾಯದವರಿದ್ದು ಸತತ ನಾಲ್ಕು ಅವಧಿಯಿಂದ ಆ ಸಮುದಾಯದವರೇ ಮುಖ್ಯಮಂತ್ರಿಯಾಗಿದ್ದರು. ಈ ಸಲ ಬಿಜೆಪಿಯು ಜಾಟ್ ಜನಾಂಗದ ಮುಖಂಡನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದೋ ಅಥವಾ ಜಾಟ್ ಸಮುದಾಯಕ್ಕೆ ಹೊರತಾದವರಿಗೆ ಅದನ್ನು ನೀಡುವುದೋ ಎಂಬುದು ಕುತೂಹಲ ಮೂಡಿಸಿದೆ.
ಶಾಸಕರಾಗಿ ಆಯ್ಕೆಯಾಗಿರುವ ಕ್ಯಾಪ್ಟನ್ ಅಭಿಮನ್ಯು, ಓಂ ಪ್ರಕಾಶ್ ಧನಕರ್, ಮನೋಹರ್ ಲಾಲ್ ಖಟ್ಟರ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ರಾಮ್ ಬಿಲಾಸ್ ಶರ್ಮ ಅವರು ಮುಖ್ಯಮಂತ್ರಿ ಗಾದಿಗೆ ತುರುಸಿನ ಪೈಪೋಟಿಯಲ್ಲಿದ್ದಾರೆ. ಒಂದೊಮ್ಮೆ ಪಕ್ಷದ ಕೇಂದ್ರ ನಾಯಕರು ಸಂಸದರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಬಗ್ಗೆ ಚಿಂತಿಸಿದರೆ ಆಗ ಕ್ರಿಷನ್ ಪಾಲ್ ಗುಜ್ಜಾರ್ ಮತ್ತು ರೋವಾ ಇಂದರ್ಜಿಂಗ್ ಸಿಂಗ್ ಅವರುಗಳ ಹೆಸರು ಸುಳಿದಾಡುವ ಸಾಧ್ಯತೆ ಇದೆ. ಆಕಾಂಕ್ಷಿಗಳೆಲ್ಲರೂ ಆಡಳಿತದ ದೃಷ್ಟಿಯಿಂದ ಅನುನುಭವಿಗಳೇ ಆಗಿದ್ದಾರೆ.