ಬೆಂಗಳೂರು: ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಎಂಜಿನ್ ನಾಯಂಡಹಳ್ಳಿ ಸಮೀಪದ ಆರ್ಪಿಸಿ ಲೇಔಟ್ ಬಳಿ ಹಳಿ ತಪ್ಪಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲು, ಬೆಳಿಗ್ಗೆ 9.25ರ ಸುಮಾರಿಗೆ ನಗರ ರೈಲು ನಿಲ್ದಾಣದಿಂದ ಮೈಸೂರಿಗೆ ಹೊರಟಿತ್ತು. ಈ ವೇಳೆ ನಾಯಂಡಹಳ್ಳಿ ಬಳಿ ರೈಲಿನ ಎಂಜಿನ್ನ ಎರಡು ಗಾಲಿಗಳು ಹಳಿ ತಪ್ಪಿದವು.
ಕೂಡಲೇ, ಲೋಕೊ ಪೈಲಟ್ ರೈಲು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಬಂದ ರೈಲ್ವೆ ಸಿಬ್ಬಂದಿ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹಳಿ ಸರಿಪಡಿಸಿದರು. ನಂತರ ಬೇರೆ ಎಂಜಿನ್ ವ್ಯವಸ್ಥೆ ಮಾಡಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರೈಲಿನಲ್ಲಿ 20 ಬೋಗಿಗಳಿದ್ದವು. ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸು ತ್ತಿದ್ದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರು– ಮೈಸೂರು ನಡುವೆ ಜೋಡಿ ಮಾರ್ಗ ಇರುವುದರಿಂದ ಇತರ ರೈಲುಗಳ ಸಂಚಾರಕ್ಕೂ ಯಾವುದೇ ತೊಂದರೆಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
‘ಘಟನೆ ಸಂಬಂಧ ತನಿಖೆ ನಡೆಸಿ, ಒಂದು ವಾರದಲ್ಲಿ ವರದಿ ಕೊಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿರಿಯ ವಿಭಾಗೀಯ ರೈಲ್ವೆ ಸುರಕ್ಷತಾ ಅಧಿಕಾರಿ ಡಾ.ಇಕ್ಬಾಲ್ ಅಹಮದ್ ಅವರು ಹೇಳಿದರು.
ರೈಲು ಡಿಕ್ಕಿ: ಕಾಡುಕೋಣ ಸಾವು
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲ್ಲೂಕಿನ ಕ್ಯಾಸಲ್ರಾಕ್ ಹತ್ತಿರದ ದೇವಳ್ಳಿ ಗೇಟ್ ಬಳಿ ರೈಲು ಡಿಕ್ಕಿಯಲ್ಲಿ ಕಾಡುಕೋಣವೊಂದು ಮೃತಪಟ್ಟಿದೆ.