ಹುಬ್ಬಳ್ಳಿ: ಹೆರಿಗೆ ಸಂದರ್ಭದಲ್ಲಿ ಸಂಭವಿಸುವ ಸಾವಿನ ಸಂಖ್ಯೆಯನ್ನು ನಿಯಂತ್ರಿಸುವುದಕ್ಕೆ ಪ್ರಸೂತಿ ತಜ್ಞರ ಅಗತ್ಯವಿದೆ ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ಸ್ತ್ರೀ ರೋಗ ವಿಭಾಗದ ಪ್ರಾಧ್ಯಾಪಕಿ ಡಾ.ಕಸ್ತೂರಿ ದೋನಿಮಠ ಹೇಳಿದರು. ವಿದ್ಯಾನಗರದ ಕೆ.ಎಲ್.ಇ ಸಂಸ್ಥೆಯ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಅಂತರರಾಷ್ಟ್ರೀಯ ಶುಶ್ರೂಷಕರ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಇಲ್ಲ. ಈ ಕೊರತೆಯಿಂದಾಗಿ ಪ್ರಸವ ಮತ್ತು ಪ್ರಸವ ಪೂರ್ವದಲ್ಲಿ ಮಹಿಳೆಯರ ಸಾವು ಸಂಭವಿಸುತ್ತಿದೆ. ಹೀಗಾಗಿ ಉತ್ತಮ ಕೌಶಲವುಳ್ಳ ಆರೋಗ್ಯ ಕಾರ್ಯಕರ್ತರನ್ನು ಹೊಂದುವುದು ಅತ್ಯವಶ್ಯವಾಗಿದೆ ಎಂದು ಅವರು ಹೇಳಿದರು.
ಡಾ. ಶೋಭಾ ಬೆಂಬಲಗಿ ಮಾತನಾಡಿದರು. ಕೆಎಲ್ಇ ಸಂಸ್ಥೆಯ ಪ್ರಾಧ್ಯಾಪಕ ಸಂಜಯ ಎಂ. ಪೇರಪುರ್, ಆಶಾ ಬಾತಖಂಡೆ, ಮೇರಲ್ ಡಿ’ಸೋಜಾ, ಕವಿತಾ ಪವಾರ್ ಇತರರು ಇದ್ದರು.