ನವದೆಹಲಿ (ಐಎಎನ್ಎಸ್): ಸಂಪುಟ ಸಹೋದ್ಯೋಗಿಗಳಲ್ಲಿ ಭಯ ಹುಟ್ಟು ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಹಾಗೂ ನಾಯಕತ್ವ ಗುಣಗಳು ಬಹುತೇಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರನ್ನು ಹೋಲುತ್ತವೆ.
ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಬರೆದಿರುವ ‘ಭಾರತವನ್ನು ಬದಲಿಸಿದ 2014ರ ಚುನಾವಣೆ’ (2014 ದ ಎಲೆಕ್ಷನ್ ದಟ್ ಚೇಂಜ್ಡ್ ಇಂಡಿಯಾ) ಪುಸ್ತಕ ಈ ವಿವಾದಾತ್ಮಕ ಅಂಶಗಳನ್ನು ಒಳಗೊಂಡಿದೆ.
ವಿರೋಧಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಮೋದಿ ಅವರ ದುರಹಂಕಾರ, ದರ್ಪ ದ ವರ್ತನೆ ಇಂದಿರಾ ಗಾಂಧಿ ಅವರನ್ನು ನೆನಪಿಸುತ್ತವೆ. ಇದರಿಂದಾಗಿ ಪ್ರಜಾಪ್ರಭುತ್ವದಲ್ಲಿಯ ಆಡಳಿತ ವ್ಯವಸ್ಥೆ ಒಂದೇ ವ್ಯಕ್ತಿಯ ಅಧೀನಕ್ಕೆ ಒಳಪಡುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದ ಮೇಲೆ ಭಾರಿ ಹಿಡಿತ ಸಾಧಿಸಿರುವ ಮೋದಿ ಸಹೋದ್ಯೋಗಿಗಳಲ್ಲಿ ಭಯ ಮೂಡಿಸಿದ್ದಾರೆ. ಸ್ವತಃ ಸಚಿವರೂ
ಸುಷ್ಮಾಮೇಲೆ ಮೋದಿಗೆ ವಿಶ್ವಾಸವಿಲ್ಲ! |
---|
ಜೇಟ್ಲಿ ಅವರನ್ನು ಬಹಳ ನಂಬಿರುವ ಪ್ರಧಾನಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಂಡರೆ ಅಷ್ಟಕಷ್ಟೆ. ಅವರ ಬಗ್ಗೆ ಕನಿಷ್ಠ ವಿಶ್ವಾಸವೂ ಇಲ್ಲ. ಅವರನ್ನು ಮೋದಿ ನಂಬುವುದಿಲ್ಲ. ಸುಷ್ಮಾ ಮಾತ್ರ ಬಿಜೆಪಿಯಲ್ಲಿರುವ ಏಕೈಕ ಪ್ರಭಾವಿ ಮಹಿಳೆ ಅಲ್ಲ ಎಂಬ ಸಂದೇಶ ರವಾನಿಸಲು ಉದ್ದೇಶಪೂರ್ವಕವಾಗಿಯೇ ಸ್ಮೃತಿ ಇರಾನಿ ಅವರಿಗೆ ಹೆಚ್ಚಿನ ಸ್ಥಾನಮಾನ ಮತ್ತು ಆದ್ಯತೆ ನೀಡಲಾಗಿದೆ. ಜೇಟ್ಲಿ ಹಾಗೂ ಇನ್ನಿತರ ಬೆರಳೆಣಿಕೆಯ ಕೆಲವರನ್ನು ಹೊರತು ಪಡಿಸಿದರೆ ಸಚಿವ ಸಂಪುಟ ಬಹುತೇಕ ಸದಸ್ಯರ ಸಾಮರ್ಥ್ಯದ ಬಗ್ಗೆ ಸ್ವತಃ ಪ್ರಧಾನಿಗೆ ವಿಶ್ವಾಸ ಹಾಗೂ ನಂಬುಗೆ ಇಲ್ಲ. ಈ ಎಲ್ಲದರ ನಡುವೆಯೂ ಮೋದಿ ಒಬ್ಬ ದೃಢ, ಬಲಾಢ್ಯ ಹಾಗೂ ವರ್ಚಸ್ವಿ ನಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಸದ್ಯ ಅವರನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್ಗಿಲ್ಲ. ಮೋದಿ ಅವರನ್ನು ಸಮರ್ಥವಾಗಿ ಎದುರಿಸುವ ನಾಯಕನನ್ನು ಕಾಂಗ್ರೆಸ್ ಹುಡುಕಬೇಕಿದೆ ಎಂದು ಸರ್ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ. |
ಪ್ರಧಾನಿ ನಿವಾಸದೊಳಗೆ ಮುಂಬಾಗಿಲಿನ ಮೂಲಕ ಪ್ರವೇಶಿಸುವಂತಿಲ್ಲ. ಅವರು ಹಿಂಬಾಗಿಲಿನಿಂದ ಪ್ರಧಾನಿ ನಿವಾಸ ಪ್ರವೇಶಿಸುವ ಪರಿಸ್ಥಿತಿ ಇದೆ. ಈ ವಿಷಯವನ್ನು ಸಚಿವರೊಬ್ಬರು ತಮ್ಮ ಎದುರು ಹೇಳಿಕೊಂಡಿದ್ದಾರೆ ಎಂದು ಸರ್ದೇಸಾಯಿ ಈ ಪುಸ್ತಕದಲ್ಲಿ ನಮೂದಿಸಿದ್ದಾರೆ.
‘ಯಾರಿಗೆ ಗೊತ್ತು? ಮನೆಯ ಯಾವ ಗೋಡೆಗಳಿಗೆ ಕಿವಿ ಇದೆ’ ಎನ್ನುವ ಸಚಿವರು ತಮ್ಮ ಮನೆಯಲ್ಲಿ ಮಾತನಾಡಲೂ ಹಿಂದೇಟು ಹಾಕುತ್ತಿದ್ದಾರೆ. ಏನಾದರೂ ರಹಸ್ಯ ಮಾತನಾಡಬೇಕೆಂದರೂ ಮನೆಯ ಹಿಂದಿನ ಉದ್ಯಾನಕ್ಕೆ ತೆರಳುವುದಾಗಿ ಹೆಸರು ಹೇಳಲು ಇಚ್ಛಿಸದ ಸಚಿವರು ತಮ್ಮ ಎದುರು ಹೇಳಿಕೊಂಡಿದ್ದಾಗಿ ಸರ್ದೇಸಾಯಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಗೊತ್ತಿರದ ಅನೇಕ ಕುತೂಹಲಕಾರಿ ಸಂಗತಿಗಳನ್ನು ಸರ್ದೇಸಾಯಿ ತಮ್ಮ ಈ ಪುಸ್ತಕದಲ್ಲಿ ರಸವತ್ತಾಗಿ ಅನಾವರಣಗೊಳಿಸುತ್ತಾ ಸಾಗುತ್ತಾರೆ.
ಕೇಂದ್ರ ಸಂಪುಟದಲ್ಲಿ ಯಾರಿರಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದು ಪ್ರಧಾನಿ ಆಪ್ತರಾದ ಅರುಣ್ ಜೇಟ್ಲಿ ಹಾಗೂ ಅಮಿತ್ ಷಾ. ಅವರು ಸಿದ್ಧಪಡಿಸಿದ ಸಚಿವ ಸಂಪುಟ ಸದಸ್ಯರ ಪಟ್ಟಿಗೆ ನಂತರ ಆರ್ಎಸ್ಎಸ್ ಅನುಮೋದನೆಯ ಮುದ್ರೆ ಒತ್ತಿದೆ. ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎನ್ನುವುದನ್ನು ಸ್ವತಃ ಮೋದಿ ನಿರ್ಧರಿಸಿದ್ದು, ಸಚಿವರ ಪಟ್ಟಿ ಗೂ ಅಂತಿಮ ಸ್ಪರ್ಶ ನೀಡಿದ್ದಾರೆ.
ರಾಹುಲ್ ನಾಯಕನೇ ಅಲ್ಲ; ಕಾಂಗ್ರೆಸ್ನಲ್ಲೇ ಗೌರವವಿಲ್ಲ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ಗುಣಗಳನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಸ್ವತಃ ರಾಹುಲ್ ಅವರಿಗೆ ಪಕ್ಷದಲ್ಲಿ ಗೌರವವಿಲ್ಲ ಎಂದೂ ಸರ್ದೇಸಾಯಿ ಹೇಳಿದ್ದಾರೆ.
ರಾಹುಲ್ಗೆ ಸ್ವತಃ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರೇ ಗೌರವ ನೀಡುತ್ತಿಲ್ಲ. ಬಹುಶಃ ಪಕ್ಷದ ಮೇಲೆ ಹಿಡಿತವಿಲ್ಲದ ಹಾಗೂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಗೌರವ ಗಳಿಸದ ರಾಹುಲ್, ನೆಹರೂ ಹಾಗೂ ಗಾಂಧಿ ಕುಟುಂಬದ ಮೊದಲ ಸದಸ್ಯನಿರಬೇಕು ಎಂದು ರಾಹುಲ್ ಸಾಮರ್ಥ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದಲ್ಲಿರುವ ಪಕ್ಷವನ್ನು ಏಕಾಂಗಿಯಾಗಿ ಮೇಲೆತ್ತುವ ಸಾಮರ್ಥ್ಯ ರಾಹುಲ್ ಅವರಲ್ಲಿ ಕಾಣುತ್ತಿಲ್ಲ. ಕಾಂಗ್ರೆಸ್ಗೆ ನೆಹರೂ ಹಾಗೂ ಗಾಂಧಿ ಕುಟುಂಬ ಆಸ್ತಿಯೂ ಹೌದು ಮತ್ತು ಹೊರೆಯೂ ಹೌದು.
ಲೋಕಸಭೆಯ ನಂತರ ದಯನೀಯ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವುದು ರಾಹುಲ್ಗೆ ಅಸಾಧ್ಯ. ತುರ್ತಾಗಿ ಕಾಂಗ್ರೆಸ್ಗೆ ವರ್ಚಸ್ವಿ ಜನನಾಯಕನ ಜರೂರಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.