ಬೆಂಗಳೂರು: ‘ಇದು ಡಿಜಿಟಲ್ ಸಾಹಿತ್ಯದ ಯುಗ. ಹೊಸ ತಲೆಮಾರಿನ ಹಲವು ಮಂದಿ ಡಿಜಿಟಲ್ ರೂಪದಲ್ಲಿ ತಮ್ಮ ಬರಹವನ್ನು ಆರಂಭಿಸುತ್ತಿದ್ದಾರೆ. ಇದರಿಂದ ಸಾಹಿತ್ಯದ ಸ್ವರೂಪವೂ ಬದಲಾಗುತ್ತಿದೆ’ ಎಂದು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಕರ್ನಾಟಕ ಗ್ರಂಥಾಲಯಗಳ ಸಂಘವು ಶನಿವಾರ ಏರ್ಪಡಿಸಿದ್ದ ‘ಗ್ರಂಥಾಲಯಗಳ ಸ್ವರೂಪ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
‘ಡಿಜಿಟಲ್ ಬರಹದ ಓದು ಕೊಡುವ ಅನುಭವಕ್ಕಿಂತ ಪುಸ್ತಕವನ್ನು ಓದುವ ಅನುಭವ ಭಿನ್ನವಾದುದು. ಹೀಗಾಗಿ ಪುಸ್ತಕಗಳು ತಮ್ಮ ಮಹತ್ವವನ್ನು ಉಳಿಸಿಕೊಂಡಿವೆ. ಟಿ.ವಿ, ಕಂಪ್ಯೂಟರ್ ಮತ್ತು ಮೊಬೈಲ್ಗಳ ಜಗತ್ತಿನಲ್ಲಿ ಬೆಳೆಯುತ್ತಿರುವ ಈಗಿನ ಮಕ್ಕಳ ಗ್ರಹಿಕೆ ಸೀಮಿತಗೊಳ್ಳುತ್ತಿದೆ’ ಎಂದರು.
‘ರಾಷ್ಟ್ರೀಯ ಗ್ರಂಥಾಲಯಗಳ ಯೋಜನೆ’ ಕುರಿತು ಮಾತನಾಡಿದ ಕೋಲ್ಕತ್ತದ ರಾಷ್ಟ್ರೀಯ ಗ್ರಂಥಾಲಯದ ನಿರ್ದೇಶಕ ಡಾ.ಪಿ.ವೈ.ರಾಜೇಂದ್ರ ಕುಮಾರ್, ‘ಈ ಯೋಜನೆ ಅಡಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಮಾದರಿ ಗ್ರಂಥಾಲಯಗಳನ್ನು ರೂಪಿಸಲಾಗುತ್ತದೆ. ಇವು ಡಿಜಿಟಲ್ ಪುಸ್ತಕ, ಅಂತರ್ಜಾಲ ವ್ಯವಸ್ಥೆ ಮತ್ತು ಪ್ರತಿಯೊಂದು ಸುದ್ದಿ ಪತ್ರಿಕೆಗಳಿಗೂ ಪ್ರತ್ಯೇಕ ವಿಭಾಗಗಳನ್ನು ಹೊಂದಿರಲಿವೆ’ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಆರ್.ಕರಿಸಿದ್ದಪ್ಪ ಮಾತನಾಡಿ, ‘ದೇಶದಲ್ಲಿಯೇ ರಾಜ್ಯದ ಗ್ರಂಥಾಲಯಗಳು ಮಾದರಿ ಎನಿಸಿಕೊಂಡಿವೆ’ ಎಂದರು.
ಡಾ.ಪಿ.ವೈ ರಾಜೇಂದ್ರ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಎಫ್.ಎಸ್. ದುರಗಣ್ಣವರ್, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ ಎಸ್.ಹೊಸಮನಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಾಹಿತಿ ಶೂದ್ರ ಶ್ರೀನಿವಾಸ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.