ನವದೆಹಲಿ (ಪಿಟಿಐ): ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳ ಸಮಸ್ಯೆಗಳನ್ನು ಸಂವೇದನೆಯಿಂದ ಮತ್ತು ಆದ್ಯತೆ ಮೇರೆಗೆ ಪರಿಶೀಲಿಸುವಂತೆ ನೂತನ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಚೇರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನಿ ಕಚೇರಿಗೆ ಬರುವ ಸಮಸ್ಯೆಗಳ ನ್ನು ತುರ್ತಾಗಿ ಇತ್ಯರ್ಥಗೊಳಿಸಲು ಲಭ್ಯವಿರುವ ಎಲ್ಲ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಪ್ರಧಾನಿ ಕಚೇರಿ (ಪಿಎಂಒ) ಅಧಿಕಾರಿಗಳೊಂದಿಗೆ ಬುಧವಾರ ಅಧಿಕೃತವಾಗಿ ಸಭೆ ನಡೆಸಿದ ಅವರು, ಜನರ ಸಮಸ್ಯೆಗಳನ್ನು ವಿಳಂಬ ಮಾಡದೇ ತ್ವರಿತಗತಿಯಲ್ಲಿ ಪರಿಹರಿಸುವಂತೆ ಸೂಚಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ರಾಜ್ಯಗಳು ಸದೃಢವಾದಾಗ ಮಾತ್ರ ಒಕ್ಕೂಟ ವ್ಯವಸ್ಥೆ ಬಲಾಢ್ಯಗೊಳ್ಳುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಯಾವುದೇ ಹೊಸ ಆಲೋಚನೆಗಳಿದ್ದಲ್ಲಿ ಸಂಕೋಚವಿಲ್ಲದೇ ಮುಕ್ತವಾಗಿ ತಮ್ಮೊಂದಿಗೆ ಹಂಚಿಕೊಳ್ಳಬಹುದು ಎಂದರು. ತಂಡವಾಗಿ ಕೆಲಸ ಮಾಡಿ-ದಾಗ ಮಾತ್ರ ದೇಶಕ್ಕೆ ಒಳ್ಳೆಯ ಆಡಳಿತ ನೀಡಬಹುದು. ಜನರ ನಿರೀಕ್ಷೆಗೆ ಸ್ಪಂದಿಸಬಹುದು ಎಂದು ಪ್ರಧಾನಿ ತಮ್ಮ ಸಿಬ್ಬಂದಿಗೆ ಹೇಳಿದರು.